ಬೆಂಗಳೂರು:ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಮಾಹಿತಿಯನ್ನು ಖಾಸಗಿ ಸಂಸ್ಥೆಯ ಮೂಲಕ ಕದಿಯುವ ಕಾರ್ಯವನ್ನು ಬಿಜೆಪಿಯವರು ಮಾಡಿದ್ದಾರೆ.
ಈ ಮೂಲಕ ಚುನಾವಣಾ ಅಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್, ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿ ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಈ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಚಿಲುಮೆ ಎಂಟರ್ಪ್ರೈಸಸ್ ಪ್ರೈ.ಲಿ. ಹೆಸರಿನ ಸಂಸ್ಥೆಗೆ ಅಕ್ರಮವಾಗಿ ಅಧಿಕಾರ ನೀಡಲಾಗಿದೆ. ಇತರೆ ಎರಡು ಕಂಪನಿಗಳಾದ ಡಿಎಪಿ, ಹೊಂಬಾಳೆ ಸಂಸ್ಥೆ ಸಹಕಾರ ನೀಡಲಿವೆ.
ಇವರು ಇವಿಎಂ ಪ್ರಿಪರೇಷನ್ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಿಕೊಡುವ ಕಾರ್ಯ ಮಾಡುತ್ತಾರೆ. ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಾಯೋಗಿಕ ಸರ್ವೆ ಆರಂಭಿಸಿದ್ದಾರೆ.
ಡಿಜಿಟಲ್ ಸಮೀಕ್ಷಾ ಆಪ್ ಆರಂಭಿಸಿ ಈ ವ್ಯಾಪಾರ ನಡೆಯುತ್ತಿದೆ. ಇವರಿಗೆ ಬೆಂಗಳೂರಿನ ಮತದಾರರ ಸಮೀಕ್ಷೆಗೆ ಸಂಪೂರ್ಣ ಪರವಾನಗಿ ನೀಡಲಾಗಿದೆ. ಬೂತ್ ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳ ಸಹಕಾರ ಇದಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ತಕ್ಷಣ ರಾಜೀನಾಮೆ ನೀಡಬೇಕು. ಚುನಾವಣಾ ಆಯೋಗ ಚುನಾವಣಾ ಅಕ್ರಮ ಎಸಗಿದವರ ವಿರುದ್ದ ಕ್ರಮ ಜರುಗಿಸಬೇಕು.
ಮುಖ್ಯಮಂತ್ರಿ ಬೊಮ್ಮಾಯಿ ಕಂಬಿ ಹಿಂದೆ ಹೋಗಲೇಬೇಕು. ಮತದಾರರ ಪಟ್ಟಿ ನವೀಕರಣಕ್ಕೆ ಯಾಕೆ ಇದೇ ಸಂಸ್ಥೆಗೆ ಅನುಮತಿ ನೀಡಲಾಗಿದೆ.. ಖಾಸಗಿ ಏಜೆನ್ಸಿಗೆ ಕನ್ನಡಿಗರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡಲು ಅವಕಾಶ ನೀಡಲಾಗಿದೆ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ.