ಬೆಳಗಾವಿ:


ಬೆಳಗಾವಿ- ಕರ್ನಾಟಕದ ಕಿರೀಟ, ಕನ್ನಡದ ಕ್ರಾಂತಿಯ ನೆಲ,ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿ ನಾಡದ್ರೋಹಿ ಎಂ.ಈ.ಎಸ್ ನಾಯಕರು ಮಹಾಮೋರ್ಚಾ ನಡೆಸುತ್ತಿದ್ದು ಇದಕ್ಕೆ ಕರ್ನಾಟಕ ಸರ್ಕಾರ,ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿ ಪ್ರತಿಭಟನೆಗೆ ಅವಕಾಶ ನೀಡಿರುವುದು ದುರ್ದೈವದ ಸಂಗತಿಯಾಗಿದ್ದು ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕನ್ನಡದ ರಕ್ಷಣೆಗೆ ಮುಂದೆ ಬರಲಿ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ನಾಡದ್ರೋಹಿ ಎಂ.ಈ.ಎಸ್ ನಾಯಕರಿಗೆ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅನುಮತಿ ಕೊಡುವದಿಲ್ಲ ಎಂದು ಹೇಳಿ ರಾತ್ರೋರಾತ್ರಿ ಅನುಮತಿ ನೀಡುತ್ತಲೇ ಬಂದಿರುವ ರಾಜ್ಯಸರ್ಕಾರಗಳು ಕನ್ನಡಿಗರಿಗೆ ದ್ರೋಹ ಬಗೆಯುತ್ತಲೇ ಬಂದಿವೆ
ಈಗ ಎಂಈಎಸ್ ನಾಯಕರು ಕನ್ನಡದ ನೆಲ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿ ಮಹಾ ಮೋರ್ಚಾ ಮಾಡುವ ಮೂಲಕ ಪುಂಡಾಟಿಕೆ ನಡೆಸಲು ನಿರ್ಧರಿಸಿದ್ದು ಇದಕ್ಕೆ ಸರ್ಕಾರದ ಹಾಗೂ ಬೆಳಗಾವಿ ಜಿಲ್ಲಾಡಳಿತ ಎಂಈಎಸ್ ಗೆ ಅನುಮತಿ ನಿರಾಕರಿಸಿ ಪ್ರತಿಭಟನೆಗೆ ಅವಕಾಶ ನೀಡುತ್ತಿರುವದು ಸರ್ಕಾರ ಕನ್ನಡಿಗರಿಗೆ ಮಾಡಿರುವ ಅಪಮಾನ, ಬೆಳಗಾವಿಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವದು ಘೋರವಾದ ಅವಮಾನ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಕನ್ನಡದ ನೆಲ,ಇಲ್ಲಿ ವಾಸ ಮಾಡುವವರು ಕನ್ನಡ,ನೆಲ,ಜಲ,ಭಾಷೆ ಮತ್ತು ಇಲ್ಲಿಯ ಸಂಸ್ಕೃತಿಗೆ ಗೌರವ ಕೊಡಬೇಕು, ಗೌರವ ಕೊಡದಿದ್ದರೆ ಜಾಗ ಖಾಲಿ ಮಾಡಬೇಕು. ಕನ್ನಡದ ನೆಲದಲ್ಲಿ ಇದ್ದು ಕನ್ನಡ ಕಡ್ಡಾಯ ಬೇಡ ಎನ್ನುವವರಿಗೆ ಸರ್ಕಾರ ಯಾವುದೇ ಮುಲಾಜಿಲ್ಲದೇ ತಕ್ಷಣ ಬೆಳಗಾವಿಯಿಂದ ಗಡಿಪಾರು ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ಕನ್ನಡದ ಪರವಾಗಿ ಬದ್ಧತೆಯನ್ನು ಪ್ರದರ್ಶಿಸಬೇಕು, ನಾಡಿನ ವಿರುದ್ಧ ಕನ್ನಡ ಭಾಷೆಯ ವಿರುದ್ಧ ಧ್ವನಿ ಎತ್ತುವವರಿಗೆ ಜೈಲಿಗೆ ಕಳಿಸಬೇಕು ಎಂದು ದೀಪಕ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಭಾಷೆಯ ವಿಚಾರ ಬಂದಾಗ ಬೆಳಗಾವಿಯ ಮಂತ್ರಿಗಳು ಸಂಸದರು ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗುತ್ತಾರೆ.ಈ ವಿಚಾರದಲ್ಲಿ ತಮ್ಮ ನಿಲುವು ವ್ಯಕ್ತಪಡಿಸುವದಿಲ್ಲ, ಜನಪ್ರತಿನಿಧಿಗಳ ಈ ಧೋರಣೆಯಿಂದ ಬೆಳಗಾವಿಯ ಕನ್ನಡಿಗರಿಗೆ ಬೇಸರವಾಗಿದೆ. ಮಹಾಮೋರ್ಚಾ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕನ್ನಡದ ರಕ್ಷಣೆಗೆ ನಿಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕನ್ನಡಿಗರು ತಕ್ಕಪಾಠ ಕಲಿಸುತ್ತಾರೆ ಎಂದು ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಕಡ್ಡಾಯಗೊಳಿಸಲು ಯಾರ ಅಪ್ಪಣೆ ಬೇಕಾಗಿಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ವಿರುದ್ಧ ಧ್ವನಿ ಎತ್ತಲು ಅವಕಾಶ ನೀಡಿದವರು ರಾಜಕೀಯವಾಗಿ ನಿರ್ನಾಮ ಆಗುತ್ತಾರೆ .ತಾಯಿ ಭುವನೇಶ್ವರಿಯ ಶಾಪ ಅವರಿಗೆ ತಟ್ಟುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಕಿಡಿಕಾರಿದ್ದಾರೆ.
ಕನ್ನಡದ ರಕ್ಷಣೆಗೆ ಸ್ಥಳೀಯ ಜನಪ್ರತಿನಿಧಿಗಳು ಧಾವಿಸದಿದ್ದರೆ ಕನ್ನಡದ ಸೇನಾನಿಗಳು ಸುಮ್ಮನಿರಲು ಸಾಧ್ಯವಿಲ್ಲ ಜೂನ್ 22 ರಂದು ಎಂಈಎಸ್ ಮಹಾಮೋರ್ಚಾಗೆ ವಿರುದ್ಧವಾಗಿ ಬೆಳಗಾವಿಯಲ್ಲಿ ಅದೇ ದಿನ ಕನ್ನಡದ ನೆಲದಲ್ಲಿ ಕನ್ನಡ ಕಡ್ಡಾಯ ನಿರಂತರ. ಎಂಬ ಸ್ವಾಭಿಮಾನಿ ರ್ಯಾಲಿ ನಡೆಸುತ್ತೇವೆ. 22 ರಂದು ಬೆಳಿಗ್ಗೆ ೧೧-00 ಗಂಟೆಗೆ ಈ ರ್ಯಾಲಿ ಬೆಳಗಾವಿಯ ಧರ್ಮವೀರ ಸಂಬಾಜಿ ವೃತ್ತದಿಂದ ಆರಂಭವಾಗಿ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳಿಗೆ ಬೆಳಗಾವಿಯಲ್ಲಿ ಕನ್ನಡ ನಿತ್ಯ ನಿರಂತರ ಎನ್ನುವ ಮನವಿ ಅರ್ಪಿಸುತ್ತೇವೆ. ಕರವೇ ಹೊರಡಿಸುವ ಈ ಸ್ವಾಭಿಮಾನಿ ರ್ಯಾಲಿಯಲ್ಲಿ ಕನ್ನಡದ ಅಭಿಮಾನಿಗಳು ಸಹಸ್ರ,ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡದ ತೇರು ಎಳೆಯಬೇಕೆಂದು ದೀಪಕ ಮನವಿ ಮಾಡಿಕೊಂಡಿದ್ದಾರೆ…








