ಬೆಳಗಾವಿ:
ಬಡ ಕುಟುಂಬಗಳಿಗೆ ಆಮಿಷ ಒಡ್ಡಿ ಅನ್ಯಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.ಬೆಳಗಾವಿಯಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಡ ಕುಟುಂಬಗಳಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನ ನಡೆಸಿದ ಆರೋಪ ಕೇಳಿ ಬಂದಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಮತಾಂತರ ಮಾಡ್ತಿದ್ದ ಕುಟುಂಬ ಸದಸ್ಯರ ಮನೆಗೆ ಬಜರಂಗದಳ ಕಾರ್ಯಕರ್ತರು ಭೇಟಿ ನೀಡಿದ್ದು ಭಜರಂಗದಳದ ಕಾರ್ಯಕರ್ತನೊಬ್ಬನ ಮೊಬೈಲ್ ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ಸಲ್ಲಿಸುವ ವಿಡಿಯೋ ಸೆರೆಯಾಗಿದೆ.ಈ ವೇಳೆ ಭಜರಂಗದಳದ ಕಾರ್ಯಕರ್ತರು ಕಕ್ಕೇರಿಗೆ ಬಂದಿದ್ದ ಆಸಾಮಿಗಳನ್ನು ತರಾಟೆಗೆ ತೆಗೆದುಕೊಳ್ತಿದ್ದಂತೆ ಅಲ್ಲಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ.ಪ್ರಕರಣದ ಸಮಗ್ರ ತನಿಖೆಗೆ ಭಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದು
ಕಾನೂನು ಬಾಹಿರವಾಗಿ ಧಾರ್ಮಿಕ ಚಟುವಟಿಕೆ ಮಾಡುವುದನ್ನು ತಡೆಯಲು ಭಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂತರ ಯತ್ನ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದ ಪೊಲೀಸರ ಮುಂದೆ ಕುಟುಂಬಸ್ಥರು ನಾವು ಮತಾಂತರ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಮತಾಂತರ ಮಾಡಲು ಬಂದಿದ್ದ ಆಸಾಮಿಗಳು ಮತ್ತೊಮ್ಮೆ ಬಂದರೆ ಮಾಹಿತಿ ನೀಡಿ ಎಂದು ಕುಟುಂಬಸ್ಥರಿಗೆ ತಿಳಿಸಿ ಅಲ್ಲಿಂದ ಪೊಲೀಸರು ವಾಪಸ್ ಆಗಿದ್ದಾರೆ ಎನ್ನಲಾಗಿದೆ.ಸದ್ಯ ಘಟನೆಯು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.












