ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗರನ್ನು ಬುಧವಾರ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ಬೆಚ್ಚಿಬೀಳಿಸಿದೆ. ನಿಖರ ಮಾಹಿತಿ ಪಡೆದು ನಗರ ಅಪರಾಧ ವಿಭಾಗ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು ಒಬ್ಬ ಜೈಲಿನಲ್ಲಿದ್ದರೆ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ.
ನಗರ ಸೇರಿದಂತೆ ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯವೆಸಗುವ ಮೂಲಕ ಶಾಂತಿಯ ತೋಟದಲ್ಲಿ ಆಶಾಂತಿ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಲ್ಇಟಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾದ ಬೆಂಗಳೂರು ಮೂಲದ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್ರಬ್ಬಾನಿ ಬಂತ ಉಗ್ರರು ಎಂದು ಗುರುತಿಸಲಾಗಿದೆ.
ಬಂಧಿತ ಉಗ್ರರ ಮಾಸ್ಟರ್ ಮೈಂಡ್ ಎನ್ನಲಾದ ಪ್ರಮುಖ ಉಗ್ರ ಜುನೈದ್ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
ಬಂಧಿತ ಉಗ್ರರಿಂದ 7 ನಾಡ ಪಿಸ್ತೂಲು, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಮಾದರಿಯ ವಾಕಿಟಾಕಿ, 12 ಮೊಬೈಲ್ ಫೋನ್ಗಳು, ವಿವಿಧ ಕಂಪನಿಗಳ ಸಿಮ್ಗಳು, ಲ್ಯಾಪ್ಟಾಪ್, ಧರ್ಮಬೋಧನೆಯ ಪುಸ್ತಕಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಪ್ರಮುಖ ಕಟ್ಟಡಗಳು, ಗಣ್ಯರು, ಐಟಿಬಿಟಿ ಕಂಪನಿಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್ ಸ್ಪೋಟಿಸಲು ಬಂಧಿತರು ಸಂಚು ರೂಪಿಸಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.