ಮುಂಬೈ: ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಸಮೀಪದ ಹಿರೇಬಾಗವಾಡಿ ಟೋಲ್ ಬೂತ್ ಬಳಿ ಮಹಾರಾಷ್ಟ್ರದಿಂದ ಬಂದ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ
ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್ ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಕುರಿತು ತಮ್ಮ ನಿಲುವನ್ನು ಮಂಡಿಸಿದರು. ಅಲ್ಲದೆ, ಇಷ್ಟೆಲ್ಲ ಆದರೂ ಮಹಾರಾಷ್ಟ್ರದ ಜನರ ಧೋರಣೆ ತಾಳ್ಮೆಯಿಂದಲೇ ಇತ್ತು. ಆದರೆ ತಾಳ್ಮೆಗೂ ಮಿತಿಯಿದೆ ಎಂದು ಎಚ್ಚರಿಸಿದರು
ಮುಂದಿನ 24 ಗಂಟೆಗಳಲ್ಲಿ ದಾಳಿಗಳು ನಿಲ್ಲದಿದ್ದರೆ, ನಮ್ಮ ತಾಳ್ಮೆ ಬೇರೆಯ ತಿರುವು ತೆಗೆದುಕೊಳ್ಳುತ್ತದೆ. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿಯೇ ಹೊಣೆಯಾಗುತ್ತಾರೆ. ಇನ್ನು 48 ಗಂಟೆಯಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ನಾನು ಸೇರಿದಂತೆ ಎಲ್ಲರೂ ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಶರದ್ ಪವಾರ್ ಅಲ್ಟಿಮೇಟಂ ನೀಡಿದ್ದಾರೆ.
ಬೊಮ್ಮಾಯಿ ಹೇಳಿಕೆಯಿಂದ ಗಡಿ ಭಾಗದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಬೆಳಗಾವಿಯಲ್ಲಿ ನಡೆದಿರುವುದು ಖಂಡನೀಯ. ಬಾಬಾಸಾಹೇಬ್ ಅವರ ಪುಣ್ಯಸ್ಮರಣೆ ದಿನದಂದು ಗಡಿಯಲ್ಲಿ ನಡೆದ ಈ ಘಟನೆ ಖಂಡನೀಯ ಎಂದು ಶರದ್ ಪವಾರ್ ಹೇಳಿದ್ದಾರೆ. ದೇವೇಂದ್ರ ಫಡ್ನವಿಸ್ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ವಿಷಯ ತಿಳಿಗೊಳಿಸಬೇಕು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಪವಾರ್ ಹೇಳಿದ್ದಾರೆ.