ರಾಜ್ಯ

ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯಾದ್ಯಂತ ಗಲಾಟೆ…!

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಾದ್ಯಂತ ಗಲಾಟೆಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ, ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ವಿದ್ಯುತ್ ಬಿಲ್ ಹಾಗೂ ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ದರ ಪಾವತಿಸುವುದಿಲ್ಲ ಎಂದು ಗ್ರಾಮೀಣ ಭಾಗದಲ್ಲಿ ಗಲಾಟೆಗಳು ಹೆಚ್ಚಾಗುತ್ತಿವೆ. ಸರ್ಕಾರಿ ಅಕಾರಿಗಳು ಹಾಗೂ ಜನ ಸಾಮಾನ್ಯರ ಜೊತೆ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಈ ಕುರಿತ ಘಟನೆಗಳ ವಿಡಿಯೋಗಳು ಸಾರ್ವಜನಿಕವಾಗಿ ವೈರಲ್ ಆಗುತ್ತಿವೆ.

ಸರ್ಕಾರ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ, ಕಾನೂನು ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆಲವು ಕಡೆ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿವೆ. ಆದರೂ ಸರ್ಕಾರ ಸರಿಯಾದ ಸ್ಪಷ್ಟನೇ ನೀಡದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿವೆ. ಶೀಘ್ರವೇ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಬೀದಿಗಿಳಿಯುವುದಾಗಿ ಎಚ್ಚರಿಸುತ್ತಿವೆ. ವಿಪಕ್ಷಗಳ ಹೇಳಿಕೆ ಜನ ಸಾಮಾನ್ಯರನ್ನು ಮತ್ತಷ್ಟು ಪ್ರಚೋದಿಸುತ್ತಿದೆ. ಹಾಗಾಗಿ ಸಂಘರ್ಷದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿವೆ.
ಸಾರ್ವಜನಿಕ ವಲಯದಲ್ಲಿ ಗೊಂದಲಗಳು ಹೆಚ್ಚಾದರೂ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರದ ಪ್ರತಿನಿಧಿಗಳಾಗಿ ಯಾರು ಸ್ಪಷ್ಟನೆ ನೀಡುತ್ತಿಲ್ಲ. ಬಹುತೇಕ ಖಾತೆ ಹಂಚಿಕೆಯಾಗಿಲ್ಲ. ಹಾಗಾಗಿ ಯಾರು ಹೇಳಿಕೆ ನೀಡಬೇಕು ಎಂಬ ಗೊಂದಲ ಇದೆ. ಆವರೆಗೂ ಪ್ರತಿಪಕ್ಷಗಳು ಏನೇಲ್ಲಾ ಆರೋಪ ಮಾಡುತ್ತವೋ ಮಾಡಲಿ ಅನಂತರ ಇಲಾಖೆಗಳ ಜವಾಬ್ದಾರಿ ಹೊಂದಿರುವವರು ತಕ್ಕ ಎದಿರೇಟು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

TV24 News Desk
the authorTV24 News Desk

Leave a Reply