ರಾಜ್ಯ

ಮಹಾ ಸಿಎಂಗೆ ಓಪನ್ ಚಾಲೆಂಜ್ ಕೊಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್  ಹೇಳಿಕೆಗಳನ್ನು ನೀಡಿ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ಸಿಎಂ ಬೊಮ್ಮಾಯಿ , ಮಹಾರಾಷ್ಟ್ರದ ಕನಸು ಎಂದೂ ನನಸಾಗುವುದಿಲ್ಲ. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಸುಪ್ರೀಂಕೋರ್ಟನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಅಂತಿಮ ವಿಚಾರಣೆ ಆರಂಭವಾಗಿದೆ. ಇದೇ ವೇಳೆ ಪದೇ ಪದೇ ಕನ್ನಡಿಗರನ್ನು ಕೆರಳಿಸುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಜತ್ ತಾಲೂಕು ಕರ್ನಾಟಕಕ್ಕೆ ಸೇರಬೇಕು ಎಂದಿದ್ದ ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿ ಉತ್ತರ ನೀಡಿದ್ದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಇಲ್ಲಿನ ಒಂದು ಸಣ್ಣ ಹಳ್ಳಿಯೂ ಕೂಡ ಆ ರಾಜ್ಯಕ್ಕೆ ಸೇರಲು ಬಿಡುವುದಿಲ್ಲ. ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಮಗ್ರತೆಗೆ ಬದ್ಧವಾಗಿದೆ. ಇಲ್ಲಿನ ಯಾವೊಂದು ಜಾಗವೂ ಕರ್ನಾಟಕಕ್ಕೆ ಸೇರಲು ಬಿಡುವುದಿಲ್ಲ. ಮರಾಠಿ ಭಾಷಿಕರು ಇರುವ ಬೆಳಗಾವಿ ಮಾತ್ರವಲ್ಲದೇ, ಕಾರವಾರ, ನಿಪ್ಪಾಣಿಯ ಗ್ರಾಮಗಳ ಸೇರ್ಪಡೆಗೆ ನಮ್ಮ ಸರ್ಕಾರ ಹೋರಾಟ ಮಾಡಲಿದೆ ಎಂದಿದ್ದರು.
ಇದಕ್ಕೆ ಬುಧವಾರ ರಾತ್ರಿ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದ ಸಿಎಂ ಬೊಮ್ಮಾಯಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ. ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಿದೆ. ಇದುವರೆಗೂ ಅದು ಯಶಸ್ವಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ಧರಾಗಿದ್ದೇವೆ ಎಂದು ಎಚ್ಚರಿಸಿದ್ದಾರೆ. 
TV24 News Desk
the authorTV24 News Desk

Leave a Reply