ಕಲಬುರಗಿ : ಜೇವರಗಿ ತಾಲೂಕಿನ ಜೈನಾಪುರದ ಶರಣಬಸಪ್ಪ ದೊಡ್ಡಮನಿ ಎಂಬಾತನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ಒಟ್ಟು 30 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮಹಾಗಾಂವ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳನೂರ ಗ್ರಾಮದ ಅಮೃತ ಲಕ್ಷ್ಮಣ ಪೊಲೀಸಪಾಟೀಲ,ಆತನ ಪತ್ನಿ ವೆಂಕಮ್ಮ ಹಾಗೂ ಶ್ರೀನಿವಾಸ ಸರಡಗಿ ಗ್ರಾಮದ ಬಸವರಾಜ ರೇವಣಸಿದ್ದಪ್ಪ ಕಡಬೂರ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಕೊಲೆಯಾದ ಶರಣಬಸಪ್ಪ ಹಾಗೂ ತನ್ನ ಪತ್ನಿ ವೆಂಕಮ್ಮರ ನಡುವೆ ಸಲುಗೆ ಇರುವದು ತಿಳಿದು ಆಕ್ರೋಶಗೊಂಡ ಅಮೃತನು,ಪತ್ನಿಯ ಮೂಲಕ ಶರಣಬಸಪ್ಪ ಬಾಳೆ ತೋಟಕ್ಕೆ ಬರುವಂತೆ ಮಾಡಿದ್ದಾನೆ.ಆ ಸಂದರ್ಭ ದಲ್ಲಿ ಶರಣಬಸಪ್ಪನ ಕೊಲೆ ಮಾಡಿ ಮೃತ ದೇಹವನ್ನು ಕುರಿಕೋಟಾ ಬಳಿ ಬೆಣ್ಣೆತೊರೆ ನೀರಿನಲ್ಲಿ ಹಾಕಿದ್ದರು.ರುಂಡವನ್ನು ಬೇರ್ಪಡಿಸಿ ಕಂಟಿಯಲ್ಲಿ ಎಸೆಯಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಮೂವರನ್ನು ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ.ಸರಕಾರದ ಪರವಾಗಿ 3 ನೇ ಹೆಚ್ಚುವರಿ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.