


ಬೆಳಗಾವಿ:
ಮಠದಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದವರನ್ನು ಪ್ರಶ್ನೆ ಮಾಡಿದ್ದ ಸ್ವಾಮೀಜಿಗಳ ಮೇಲೆಯೇ ದುರುಳರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿರುವ ಹುಣಶಿಕೊಳ್ಳಮಠದ ಶ್ರೀ ಸಿದ್ದಬಸವ ಸ್ವಾಮೀಜಿಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಯಮಕನಮರಡಿ ಗ್ರಾಮದಲ್ಲಿರುವ ಹುಣಶಿಕೊಳ್ಳ ಮಠದ ಆವರಣದಲ್ಲಿ ಕೆಲ ದಿನಗಳಿಂದ ಕಿಡಿಗೇಡಿಗಳು ಮಾದಕ ವಸ್ತು ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ಜು 1 ನೇ ತಾರೀಕು ಸ್ವಾಮೀಜಿಯೇ ಸ್ಥಳಕ್ಕೆ ತೆರಳಿ ಮಾದಕ ವ್ಯಸನದಲ್ಲಿ ತೊಡಗಿದ್ದರವರನ್ನು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ವಾಮೀಜಿಗಳೊಂದಿಗೆ ವಾದಕ್ಕೀಳಿದ ಕೆಲ ಕಿಡಿಗೇಡಿಗಳು ಸ್ವಾಮೀಜಿಯವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.ಅಲ್ಲದೇ ಸ್ವಾಮೀಜಿಗಳ ಜೊತೆಗಿದ್ದ ಶಿಷ್ಯನ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಸ್ವಾಮೀಜಿಯವರನ್ನು ದುರುಳರಿಂದ ರಕ್ಷಿಸಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿದ್ದಬಸವ ಶ್ರೀಗಳು ಹಲವು ದಿನಗಳಿಂದ ಮಠದ ಆವರಣದಲ್ಲಿಯೇ ಮಾದಕ ವ್ಯಸನಿಗಳು ಈ ಮೊದಲಿನಿಂದಲೂ ಮಾದಕ ವಸ್ತು ಹಾಗೂ ಪದಾರ್ಥಗಳನ್ನು ಇಲ್ಲೆಯೇ ಸೇವನೆ ಮಾಡುತ್ತಿದ್ದರು ನಾನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಒಟ್ಟು ಎಂಟು ಜನರ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.








