ಬೆಳಗಾವಿ: ಗೋಕಾಕ-ರೋಡ್ (ಕೊಣ್ಣೂರ) ರೈಲು ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ₹18 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣಗೊಳ್ಳುತ್ತಿರುವ ನಿಲ್ದಾಣ ಪುನರಾಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದ ಆಡಳಿತವನ್ನು ಗಮನಿಸಿದ್ದೇನೆ ಅದರಂತೆ ಬಿಜೆಪಿ ಪಕ್ಷದ ಆಡಳಿತವನ್ನೂ ಗಮನಿಸಿದ್ದೇನೆ, ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಜಾತಿ ಜಾತಿಗಳ ನಡುವೆ ಸಂಘರ್ಷ ಬೆಳೆಸುತ್ತ ಬಂದಿದೆ. ಬಿಜೆಪಿ ದೇಶದ ಹಿತವನ್ನು ಬಯಸುವ ಪಕ್ಷ. ವಿರೋಧ ಪಕ್ಷ ಬರಿ ಟೀಕೆ ಮಾಡಲು ಮಾತ್ರ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹೈಟೆಕ್ ಸ್ಪರ್ಶ ಪಡೆಯುತ್ತಿವೆ. ಮಾಜಿ ರೈಲು ಸಚಿವ ಸ್ನೇಹಿತ ಸುರೇಶ ಅಂಗಡಿಯವರ ಕನಸು ಇಂದು ನನಸಾಗಿದೆ. ಗೋಕಾಕ ರೋಡ್ ಹಾಗೂ ಘಟಪ್ರಭಾ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಅವರು ಶ್ರಮವಹಿಸಿದ್ದಾರೆ’ ಎಂದರು.
ರೈಲ್ವೆ ಇಲಾಖೆಯ ಎಚ್ಡಿಆರ್ಎಂ ಸಂತೋಷ ವರ್ಮಾ, ಸಿಇಇ ಮೀನಾ, ಎಸಿಎಂ ನಿವೇದಿತಾ, ಮಹಾಂತೇಶ ವಕ್ಕುಂದ ಇದ್ದರು.