ಬೆಂಗಳೂರು: ಕಳೆದ ಹತ್ತರಿಂದ 15 ದಿನಗಳಿಂದ ಹೈವೋಲ್ಟೇಜ್ ಮೀಟಿಂಗ್ ಮಾಡಿರುವ ನಾಯಕರು, 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನ್ ಹೇಳುತ್ತೆ? ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು , ತೀವ್ರ ಕುತೂಹಲ ಕೆರಳಿಸಿರುವ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಸಂಜೆಯೊಳಗೆ ಬಿಡುಗಡೆಯಾಗಲಿದ್ದು, ಘಟಾನುಘಟಿಗಳಿಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ.
ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ವರಿಷ್ಠರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, 170ರಿಂದ 180 ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕಾಗುತ್ತದೆ ಎನ್ನುವ ಮೂಲಕ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ನಿನ್ನೆ ತಡರಾತ್ರಿ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ 175ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆ ಮಾತ್ರ ಬಾಕಿ ಉಳಿದಿದೆ.ಈ ಸಂಬಂಧ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಿವಾಸದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ.
ಸಮೀಕ್ಷೆಗೆ ಮೊರೆ ಹೋದ ಬಿಜೆಪಿ!
ಇದರ ನಡುವೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮತ್ತೆ ಸರ್ವೇಯ ಮೊರೆ ಹೋಗಿದೆ. ಮೂವತ್ತರಿಂದ ನಲವತ್ತು ಕ್ಷೇತ್ರದಲ್ಲಿ ಮತ್ತೊಂದು ಸರ್ವೆಗೆ ನಾಯಕರು ಮುಂದಾಗಿದ್ದಾರೆ. ಮೊನ್ನೆ ರಾತ್ರಿಯಿಂದಲೇ ಸರ್ವೆಗೆ ಸೂಚಿಸಿರೋ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ. ಒಟ್ಟು ಮೂರು ಪ್ರತ್ಯೆಕ ಸಂಸ್ಥೆಗಳಿಂದ ಸರ್ವೆ. ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಆಗಲಿದೆ. ಇಂದು ಸಂಜೆಯ ಒಳಗೆ ಮೂರು ಸರ್ವೆಯ ವರದಿ ಬರಲಿದ್ದು. ವರದಿ ಬಂದನಂತರ ಇಂದು ರಾತ್ರಿ ಮತ್ತೊಂದು ಸುತ್ತಿನ ನಾಯಕರ ಸಭೆ ನಡೆಯಲಿದೆ. ತದ ನಂತರವೆ ಟಿಕೆಟ್ ಫೈನಲ್ ಆಗಲಿದೆ. ಈ ಎಲ್ಲಾ ಹಿನ್ನೆಲೆ ಪಟ್ಟಿ ಬಿಡುಗಡೆಗೆ ನಾಯಕರು ವಿಳಂಬ ಮಾಡುತ್ತಿದ್ದಾರೆ.