ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಈ ಸನ್ನಿವೇಶಕ್ಕೆ ಸರಿಯಲ್ಲ. ನಮಗೆ ಸದಾ ಆಪರೇಷನ್ ಕಮಲದ ಆತಂಕವಿದೆ. ಆದರೆ ಅವರ ಪ್ರಯತ್ನ ಸಫಲವಾಗುವುದಿಲ್ಲ. ಈ ಹಿಂದೆ ಆದ ಅನುಭವ ನಮಗಿದ್ದು, ಈಗ ಅಂತಹ ವಾತಾವರಣವಿಲ್ಲ ಎಂದರು.
ಆಪರೇಷನ್ ಕಮಲದ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಾರೆ. ಅವರ ಮುಖಂಡರ ವಿರುದ್ಧವೇ ಅವರ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಮಾಡುವಂತವರು ಯಾರೂ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಂಪರ್ಕದಲ್ಲಿ ಇರಬಹುದು ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ನಿಂದ ಕೆಲವರು ಬರುವವರು ಇದ್ದಾರೆ. ಕೆಲವರು ಬಹಿರಂಗವಾಗಿ ನಾಯಕರನ್ನು ಭೇಟಿ ಮಾಡಿದ್ದರೆ, ಮತ್ತೆ ಕೆಲವರು ಗೌಪ್ಯವಾಗಿ ಭೇಟಿ ಮಾಡಿದ್ದಾರೆ. ಕೆಲವರು ಸ್ವಪ್ರೇರಣೆಯಿಂದ ಬಂದರೆ ಸ್ವಾಗತ ಎಂದು ಅವರು ತಿಳಿಸಿದರು.