ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನನಿತ್ಯ ಒಂದೊಂದು ರೀತಿಯ ಹೇಳಿಕೆಗಳು, ವದಂತಿಗಳು ವ್ಯಾಪಕವಾ ಗುತ್ತಿದ್ದು ಡಿಸೆಂಬರ್ ವೇಳೆಗೆ ಸುಮಾರು 20ರಿಂದ 30ರಷ್ಟು ಪ್ರಭಾವಿ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇದೆ. 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಅರೆಬೈಲು ಶಿವರಾಮ್ ಹೆಬ್ಬಾರ್, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಜೆಡಿಎಸ್ ತೊರೆದು ಹೋಗಿದ್ದ ಗೋಪಾಲಯ್ಯ ಅವರು ಮರಳಿ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ ಎಂಬ ಮಾಹಿತಿಗಳಿವೆ.
ಮೇಲ್ನೋಟಕ್ಕೆ ತಾವು ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಸೇರುವುದಿಲ್ಲ ಎಂಬ ಹೇಳಿಕೆಯನ್ನು ಈಗಾಗಲೇ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ನೀಡಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಕಾಂಗ್ರೆಸ್ ಸೇರ್ಪಡೆಯಾಗಲು ಬಯಸಿದ್ದರಾದರೂ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅನುಮತಿ ನೀಡುತ್ತಿಲ್ಲ ಎಂಬ ಮಾಹಿತಿ ಇದೆ.
ಉಳಿದವರ ಪೈಕಿ ಎಸ್.ಟಿ.ಸೋಮಶೇಖರ್, ಸುಧಾಕರ್, ಕೆ.ಗೋಪಾಲಯ್ಯ, ಅರೆಬೈಲು ಶಿವರಾಮ್ ಹೆಬ್ಬಾರ್ ಅವರನ್ನು ಸೇರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸಿದ್ದಾರೆ. ಸಿದ್ದರಾಮಯ್ಯ ಅವರು ಭೈರತಿ ಬಸವರಾಜ್, ಎಂಟಿಬಿ ನಾಗರಾಜ್ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ವಹಿಸಿದ್ದಾರೆ. ಮುನಿರತ್ನ ಅವರ ಪರವಾಗಿಯೂ ಸಿದ್ದರಾಮಯ್ಯ ವಕಾಲತ್ತು ವಹಿಸಿದ್ದಾರೆ ಎಂದು ಹೇಳಲಾಗಿದೆ.