ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೂ ಮುನ್ನಾ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದು ಶೆಟ್ಟರ್ ಅವರನ್ನು ಸೆಳೆಯಲು ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ನಾಯಕರು ಸುತ್ತಲೂ ಏಳುಸುತ್ತಿನ ಕೋಟೆ ನಿರ್ಮಿಸಿದ್ದರು. ಪ್ರತಿಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದರು.
ತಡ ರಾತ್ರಿಯವರೆಗೂ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದ ಕಾಂಗ್ರೆಸಿಗರು ಬಿಜೆಪಿಗರ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಮೂಲಕ ರಾಜಕೀಯದ ಚದುರಂಗದಾಟವಾಡಿದರು. ಕೇಂದ್ರ, ರಾಜ್ಯ ನಾಯಕರು ಏನೆಲ್ಲಾ ಕಸರತ್ತು ನಡೆಸಿದರು ಶೆಟ್ಟರ್ರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ಸೇರ್ಪಡೆಯಾಗುವ ಮುನ್ನಾ ಶೆಟ್ಟರ್ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರು ಎನ್ನಲಾಗಿದೆ. ಕಾಂಗ್ರೆಸ್ನಲ್ಲಿ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ಚುನಾವಣೆ ಮುಗಿದ ಮೇಲೆ ನಿರ್ಲಕ್ಷ್ಯಿಸಬಾರದು, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಬಿ-ಫಾರಂ ಅನ್ನು ತಕ್ಷಣವೇ ತಮಗೆ ನೀಡಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಷರತ್ತು ವಿಸಿದ್ದಾರೆ ಎಂದು ಹೇಳಲಾಗಿದೆ.