ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆ 21 ಗಣ್ಯರಿಗೆ ಮಾತ್ರ ಅವಕಾಶ ಇರಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ನಿಶಿತ್ ಪ್ರಮಾಣಿಕ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಸಿ.ನಾರಾಯಣಗೌಡ, ಹಾಲಪ್ಪ ಆಚಾರ್, ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ.ನಿಂಬಣ್ಣವರ್, ಅಬ್ಬಯ್ಯ ಪ್ರಸಾದ್, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, ಎಂಎಲ್ಸಿ ಎಸ್.ವಿ.ಸಂಕನೂರ್, ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ಲಾಡ್ಜಸ್ ರೆಸಾರ್ಟ್ಸ್ ಅಧ್ಯಕ್ಷ ರಾಜೇಶ್ ಕೋಟೆನ್ನವರ್ಗೆ ಅವಕಾಶ ಸಿಕ್ಕಿದೆ.
ಯುವಜನೋತ್ಸವ ಕಾರ್ಯಕ್ರಮ ಹಿನ್ನೆಲೆ ನವ ವಧವಿನಂತೆ ಗೋಕುಲ ರಸ್ತೆ ಸಿಂಗಾರಗೊಂಡಿದೆ. ರಸ್ತೆಯ ಎರಡೂ ಬದಿಯಲ್ಲಿ ಜನ ಸಾಮಾನ್ಯರ ವೀಕ್ಷಣೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಶಿವಾಜಿ ಹಾಗೂ ಬಸವೇಶ್ವರ ಜಯಂತಿ ಉತ್ಸವ ಸಮಿತಿಯಿಂದ ಗೋಕುಲ್ ರಸ್ತೆಯಲ್ಲಿ ಮೋದಿ ಅವರ ವೀಕ್ಷಣೆಗಾಗಿ ಶಿವಾಜಿ ಮತ್ತು ಬಸವೇಶ್ವರ ಮೂರ್ತಿ ಇಡಲಾಗಿದೆ.
ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 50 ಸಾವಿರ ಯುವಜನತೆ ಈ ಯುವಜನೋತ್ಸವ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಆದರೆ ರೈಲ್ವೆ ಮೈದಾನದಲ್ಲಿ 25 ಸಾವಿರ ಜನರಿಗೆ ಮಾತ್ರ ಅವಕಾಶ ಇದೆ. ಅಕ್ಕಪಕ್ಕದ ಮೈದಾನದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ.