ಬೆಳಗಾವಿ : ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ, ರಾಜಕೀಯವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿದ್ದು, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಡಬಲ್ ಇಂಜೀನ್ ಸರ್ಕಾರ ಇದ್ರೂ ಸಹ ಬೆಳಗಾವಿ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಗುಡಗಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜೀವ ಟೋಪಣ್ಣವರ ಅನೇಕ ಮಹತ್ವದ ಯೋಜನೆಗಳು ಹುಬ್ಬಳ್ಳಿ–ಧಾರವಾಡದ ಪಾಲಾಗುತ್ತಿವೆ. ಈ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಬೆಳಗಾವಿ ಜಿಲ್ಲೆಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಯವರೆಗೂ ಬರಬೇಕಾಗಿದ್ದ ಒಂದೇ ಭಾರತ ರೈಲು ಹುಬ್ಬಳ್ಳಿಯಲ್ಲೇ ನಿಂತಿದೆ. ಬೆಳಗಾವಿಗೆ ಘೋಷಣೆಯಾಗಿದ್ದ 150 ಕೋಟಿ ರೂ. ವೆಚ್ಚದ ಆರ್ಟಿಫಿಸೀಯಲ್ ಇಂಟಲೀಜನ್ಸ್ ಎಕ್ಸಲೇನ್ಸ್ ಸೆಂಟರ್ ಧಾರವಾಡ ಜಿಲ್ಲೆಯ ಪಾಲಾಗುತ್ತಿದೆ. ಇಷ್ಟೆಲ್ಲ ಮಹತ್ವದ ಯೋಜನೆಗಳು ಪಕ್ಕದ ಜಿಲ್ಲೆಗಳ ಪಾಲಾಗುತ್ತಿದ್ದರೂ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಇನ್ನುವರೆಗೆ ಚಕಾರವೆತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಅನೇಕ ಅಭಿವೃದ್ಧಿ ಯೋಜನೆಗಳು ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಪ್ಟ್ ಆಗುತ್ತಿವೆ. ಆದ್ರೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮತ್ತು ಬುಜೆಪಿ ನಾಯಕರು ಕೇವಲ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜನರ ಭಾವನೆಗಳ ಜೊತೆ ಚಲ್ಲಾಟವಾಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಾಜೀವ ಟೋಪಣ್ಣವರ ವಾಗ್ದಾಳಿ ಮಾಡಿದರು.ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಸೇರಿಸಿ ಸ್ಟಾರ್ಟ್ ಅಪ್ ಕ್ಲಸ್ಟರ್ ನಿರ್ಮಾಣ ಮಾಡಲಾಗಿದ್ದು ಈ ಯೋಜನೆಯ ಎಲ್ಲ ಚಟುವಟಿಕೆಗಳು ಹುಬ್ಬಳ್ಳಿಯಲ್ಲೇ ನಡೆಯುತ್ತಿವೆ. ಈ ಯೋಜನೆಯ ಕಾರ್ಯಸ್ಥಾನ ಹುಬ್ಬಳ್ಳಿಯಾಗಿದ್ದು ಎಲ್ಲ ನಿರ್ಣಯಗಳನ್ನು ಧಾರವಾಡ ಹುಬ್ಬಳ್ಳಿಯ ನಾಯಕರೇ ಕೈಗೊಳ್ಳುತ್ತಿದ್ದಾರೆ. ಈ ವಿಚಾರದಲ್ಲೂ ಬೆಳಗಾವಿ ಜಿಲ್ಲೆಗೆ ದೊಡ್ಡ ಅನ್ಯಾಯ ಆಗುತ್ತಿದೆ ಎಂದು ರಾಜೀವ ಟೋಪಣ್ಣವರ ಆರೋಪಿಸಿದರು.
ಹಿಂದೂ ಎಂಬ ಪದವನ್ನು ಅತೀ ಹೆಚ್ವು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ನಾಯಕರು ಭಾವನಾತ್ಮಕವಾಗಿ ಜನರ ಜೊತೆ ಚೆಲ್ಲಾಟವಾಡಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೇವಲ ಧಾರ್ಮಿಕ ವಿಚಾರಗಳ ವಿಚಾರಗಳ ಬಗ್ಗೆ ಸಂಘರ್ಷ ಮಾಡದೇ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ಗಮನಹರಿಸಿ ಕೆಲಸ ಮಾಡಬೇಕೆಂದು ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ.