ಬೆಳಗಾವಿ:
ವಿದ್ಯಾರ್ಥಿಗಳಿಗೆ ನೀಡಿದ ಊಟದಲ್ಲಿ ಹುಳು ಕಂಡು ಬಂದಿವೆ.ಊಟದಲ್ಲಿ ಹುಳು ಪತ್ತೆಯಾದ ಹಿನ್ನೆಲೆ ಹಾಸ್ಟೆಲ್ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು ಅಡುಗೆ ಮಾಡಿದ್ದ ಪಾತ್ರೆಗಳನ್ನು ಹೊರಗೆ ತಂದು ತಡರಾತ್ರಿವರೆಗೆ ಪ್ರತಿಭಟನೆ ನಡೆಸಿದ್ದಾರೆ.ಈ ಘಟನೆ ನಡೆದಿದ್ದು ಬೆಳಗಾವಿಯ ಸಂಗಮೇಶ್ವರ ಸರ್ಕಾರಿ ವಸತಿ ಶಾಲೆಯಲ್ಲಿ.
ಹಾಸ್ಟೆಲ್ ನಲ್ಲಿ ಕುಡಿಯುವ ನೀರು, ಶೌಚಕ್ಕೂ ಸಹ ನೀರಿಲ್ಲ ಎಂದು ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.ವಾರ್ಡನ್ ನಿರ್ಲಕ್ಷ್ಯ,ಹಾಗೂ ಮೇಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು ತಟ್ಟೆಯಲ್ಲಿ ಹುಳು ಕಂಡ ವಿದ್ಯಾರ್ಥಿಗಳು ಊಟವನ್ನು ಬಹಿಷ್ಕರಿಸಿದ್ದಾರೆ.
ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರೆಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದು
ಪ್ರತಿಭಟನೆ ನಡೆಸುವ ಮಾಹಿತಿ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದದರು.
ಆರೋಗ್ಯ ಸಮಸ್ಯೆ ಭೀತಿ ಹಿನ್ನೆಲೆ ಮುಂಜಾಗ್ರತೆಯಾಗಿ ಹಾಸ್ಟೆಲ್ ಗೆ ಆಂಬುಲೆನ್ಸ್ ನ್ನು ಪೊಲೀಸರು ಕರೆಸಿದ್ದರು. ಇನ್ನು ಹಾಸ್ಟೆಲ್ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು ವಾರ್ಡನ್ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
















