ಬೆಳಗಾವಿ:
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನಿನ್ನೆಯಷ್ಟೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಪ್ರಸಿದ್ಧ ನರಸಿಂಹವಾಡಿಯ ದತ್ತ ಮಂದಿರಕ್ಕೆ ಕೃಷ್ಣೆ ಸುತ್ತುವರೆದಿದ್ದಳು.ಇಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಇರುವ ದತ್ತ ದೇವನಿಗೆ ಕೃಷ್ಣೆ ಸುತ್ತುವರೆದಿದ್ದಾಳೆ. ಸಧ್ಯ ಕೃಷ್ಣಾ ನದಿಗೆ 1 ಲಕ್ಷ 9 ಸಾವಿರ ಕ್ಯೂಸೇಕ್ ಒಳಹರಿವಿದ್ದು, ಕೃಷ್ಣಾ ನದಿಯ ಉಪನದಿಗಳಾದ ದೂಧಗಂಗಾ,ವೇದಗಂಗಾ, ಪಂಚಗಂಗಾ ನದಿಗಳು ಅಪಾಯದ ಮಟ್ಟ ಮೀರುವ ಹಂತದಲ್ಲಿವೆ. ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ 11 ಸೇತುವೆಗಳು ಮುಗಳುಗಡೆಯಾಗಿದ್ದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಇರುವ ದತ್ತ ಮಂದಿರವನ್ನು ಕೃಷ್ಣಾ ನದಿಯ ನೀರು ಸುತ್ತುವರೆದಿದೆ.ಇನ್ನು ಸಾಂಭವ್ಯ ಪ್ರವಾಹ ಎದುರಾಗುವ ಸ್ಥಳಗಳಿಗೆ ಚಿಕ್ಕೋಡಿ ತಹಶೀಲ್ದಾರ್ ಚಿದಂಬರ್ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಿದಂಬರ್ ಕುಲರ್ಕಣಿ ಸಧ್ಯ ಕೃಷ್ಣಾ ನದಿಗೆ 1 ಲಕ್ಷ 9 ಸಾವಿರ ಕ್ಯೂಸೇಕ್ ಒಳಹರಿವಿದ್ದು ಅಪಾಯದ ಮಟ್ಟವನ್ನು ನದಿ ಇನ್ನೂ ಮೀರಿಲ್ಲ. ಚಿಕ್ಕೋಡಿ ತಾಲೂಕಿನಲ್ಲಿ ಈಗಾಗಲೇ 9 ಬೋಟಗಳನ್ನು ಸಿದ್ದಗೊಳಿಸಿ ಇಟ್ಟುಕೊಂಡಿದ್ದೆವೆ. ಅಲ್ಲದೆ ಕಾಳಜಿ ಕೇಂದ್ರಗಳನ್ನೂ ಸಹ ತೆಗೆದಿದ್ದೆವೆ.ಸಧ್ಯ ಯಾವುದೇ ತೊಂದರೆ ಇಲ್ಲ ಎಂದು ಮಾಧ್ಯಮಗಳಿಗೆ ಚದಂಬರ್ ಕುಲಕರ್ಣಿ ತಿಳಿಸಿದ್ದಾರೆ.

