

ಬೆಳಗಾವಿ:
ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಅದರ ಪರಿಣಾಮವಾಗಿ ರಾಜ್ಯದತ್ತ ಹರಿದು ಬರುವ ನದಿಗಳು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಹುತೇಕ ಕೆಳಹಂತದ ಸೇತುವೆಗಳ ಮೇಲೆ ನದಿ ನೀರು ಹಳ್ಳ ಕೊಳ್ಳದ ನೀರು ಹರಿಯುತ್ತಿದೆ.ಅದರಂತೆ ಬೆಳಗಾವಿ ಮಾರ್ಗದಿಂದ ಖಾನಾಪುರದ ಹೆಮ್ಮಡಗಾ ಅನಮೋಡ ಮಾರ್ಗವಾಗಿ ಗೋವಾ ಸಂಪರ್ಕಿಸುವ ರಸ್ತೆಯಲ್ಲಿರುವ ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ಸೇತುವೆಯ ಮೇಲೆ ನಡು ಮಟ್ಟದ ನೀರು ಹರಿಯುತ್ತಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ಆದರೂ ಸಹ ತುಂಬಿ ಹರಿವ ಹಳ್ಳದ ಮೇಲೆ ವಾಹನ ಸವಾರರು ಸರ್ಕಸ್ ಮಾಡುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಹರಿಯುತ್ತಿರುವ ಹಳ್ಳದ ನೀರಲ್ಲಿ ಥಾರ್ ವಾಹನವನ್ನು ದಾಟಿಸಿದ ವಿಡಿಯೋ ಸಧ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಾಯವನ್ನು ಲೆಕ್ಕಿಸದೆ ವಾಹನ ಚಾಲಕ ತುಂಬಿ ಹರಿವ ಹಳ್ಳವನ್ನು ದಾಟಿಸಿದ್ದಾನೆ. ಇನ್ನು ಖಾನಾಪುರದಲ್ಲಿರುವ ಬಹುತೇಕ ಜಲಪಾತಗಳು ಮೈದುಂಬಿಕೊಂಡಿದ್ದು ಜಲಪಾತಗಳೆದರು ಯುವಕರು ಹುಚ್ಚಾಟ ಮೆರೆಯುತ್ತಿದ್ದಾರೆ. ಮೊನ್ನೆಯಷ್ಟೆ ಖಾನಾಪುರದ ಚಿಕಲೆ ಜಲಪಾತದ ಅಡಿಯಲ್ಲಿ ಯುವಕರು ಡಾನ್ಸ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಮಳೆಗಾಲದಲ್ಲಿ ಅನಾಹುತಗಳು ಜರುಗದಿರಲಿ ಎಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಜಿಲ್ಲಾಡಳಿತ ಇಂತವುಗಳಿಗೂ ಬ್ರೇಕ್ ಹಾಕಬೇಕಿದೆ. ಹುಚ್ಚಾಟ ಮರೆಯುವ ಯುವಕರಿಗೆ ಬಿಸಿ ಮುಟ್ಟಿಸಬೇಕಿದೆ. ಆ ಮೂಲಕ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸನ್ನಧ್ಧವಾಗಬೇಕಿದೆ.