ಬೆಳಗಾವಿ: ಬೆಳಗಾವಿಯ ರೈತರ ಪಾಲಿಗೆ ಬಳ್ಳಾರಿ ನಾಲೆ ಅಕ್ಷರಶಃ ಶಾಪವಾಗಿ ಪರಣಮಿಸಿದೆ. ನಾಲೆಯ ಹೂಳೆತ್ತಿ ಎಂದು ಹಲವು ಬಾರಿ ರೈತರು ಹೋರಾಟಗಳನ್ನು ಮಾಡಿದರೂ ಸರ್ಕಾರ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ.ಹೀಗಾಗಿ ಪ್ರತಿ ಬಾರಿಯೂ ಸಹ ಮಳೆಗಾಲದಲ್ಲಿ ರೈತರು ಗದ್ದೆಗಳಿಗೆ ನುಗ್ಗುವ ನಾಲೆಯ ನೀರಿನಿಂದ ರೋಸಿ ಹೋಗಿದ್ದಾರೆ.
ಸಧ್ಯ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಕಟಾವಿಗೆ ಬಂದ ಗೆಣಸು ಗದ್ದೆಗಳಲ್ಲವೂ ಜಲಾವೃತಗೊಂಡಿವೆ.ಮೊಣಕಾಲುದ್ದ ನೀರಲ್ಲೇ ನಿಂತು ಗೆಣಸನ್ನು ಕಟಾವು ಮಾಡುವ ಪರಿಸ್ಥಿತಿ ಅನ್ನದಾತರಿಗೆ ಬಂದೊದಗಿದೆ. ಸತತವಾಗಿ ಗದ್ದೆಗಳಲ್ಲಿ ನಿಲ್ಲುವ
ನೀರಿನಿಂದ ಗೆಣಸು ಬೆಳೆ ಕೊಳೆಯುವ ಭೀತಿಯಲ್ಲಿ ಅನ್ನದಾತರಿದ್ದಾರೆ.ಹೀಗಾಗಿ ರೈತರು ಸುರಿವ ಮಳೆಯನ್ನೂ ಲೆಕ್ಕಿಸದೆ ಗೆಣಸು ಕಟಾವು ಮಾಡುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಯಳ್ಳೂರು ಸೇರಿದಂತೆ ವಿವಿಧ ಭಾಗದಲ್ಲಿ ಅತಿಹೆಚ್ಚು ಗೆಣಸು ಬೆಳೆಯನ್ನು ರೈತರು ಬೆಳೆಯುತ್ತಾರೆ.ಶಹಾಪುರ, ವಡಗಾವಿ ಅನಗೋಳ ಭಾಗದ ರೈತರು ಬೆಳೆದ ಗೆಣಸು,ತರಕಾರಿಗಳ ಜಮೀನಿಗೆ ಸಧ್ಯ ಬಳ್ಳಾರಿ ನಾಲಾ ನೀರು ನುಗ್ಗಿದೆ,ಪಶ್ಚಿಮಘಟ್ಟ ಪ್ರದೇಶದಲ್ಲಿ ವರಣನ ಆರ್ಭಟ ಹಿನ್ನೆಲೆಯಲ್ಲಿ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ಬಾರಿ ಬಳ್ಳಾರಿ ನಾಲೆಯ ಹೂಳೆತ್ತಿ ಎಂದು ರೈತರು ಮನವಿ ಮಾಡಿಕೊಂಡರೂ ಸಹ ಜಿಲ್ಲಾಡಳಿತವಾಗಲಿ ಅಥವಾ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಅದರ ಪರಿಣಾಮವಾಗಿ ಸಧ್ಯ ನಾಲಾ ನೀರು ಜಮೀನಿಗೆ ನುಗ್ಗಿದೆ.ಗೆಣಸು, ತರಕಾರಿ ಬೆಳೆದು ಕಟಾವಿಗೆ ಮುಂದಾಗಿದ್ದ ಬೆಳಗಾವಿ ರೈತರು ಸಧ್ಯ ಕಂಗಾಲಾಗಿದ್ದಾರೆ. ಜಲಾವೃತಗೊಂಡ ಜಮೀನಿನಲ್ಲಿಯೇ ಗೆಣಸು ಕಟಾವು ಮಾಡಲು ರೈತರು ಪರದಾಟ ನಡೆಸುತ್ತಿದ್ದಾರೆ.ಬೆಳೆ ಉಳಿಸಿಕೊಳ್ಳಲು ಜಲಾವೃತಗೊಂಡ ಜಮೀನಿನಲ್ಲಿ ರೈತರು ಹರಸಾಹಸ ಪಡುತ್ತಿದ್ದಾರೆ. ಕೊತಂಬರಿ, ಸಬ್ಬಸಗಿ, ಮೆತ್ತೆ ಸೇರಿ ಹಲವು ತರಕಾರಿ ಬೆಳೆಗಳು ಹಾನಿ ಆಗುವ ಭೀತಿಯಲ್ಲಿ ಸಧ್ಯ ಬೆಳಗಾವಿಯ ಅನ್ನದಾತರಿದ್ದಾರೆ.


