ಬೆಳಗಾವಿ:
ಮಹಿಳೆಯನ್ನು ಮಠದಲ್ಲಿರಿಸಿಕೊಂಡಿದ್ದಕ್ಕೆ ಮೂಡಲಗಿ ತಾಲೂಕಿನ ಅಡವಿಸಿದ್ದೇಶ್ವರ ಮಠದಲ್ಲಿ ದಾಂಧಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ಆಗುತ್ತಿವೆ. ಮಠಕ್ಕೆ ನುಗ್ಗಿದ ಕೆಲ ಗ್ರಾಮಸ್ಥರು ಸ್ವಾಮೀಜಿಯವರು ಮಹಿಳೆಯನ್ನ ರಾತ್ರಿ ಮಠದಲ್ಲಿ ಇರಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿ ಸ್ವಾಮೀಜಿಯವರು ಮಠದಲ್ಲಿ ಇರಬಾರದು ಎಂದು ವಾದ ಮಾಡಿದ್ದರಿಂದ ಸ್ವಾಮೀಜಿ ಸಧ್ಯ ಗೋಕಾಕನ ಮಠ ಒಂದರಲ್ಲಿ ಇದ್ದಾರೆ. ಆದರೆ ಸಧ್ಯ ಅದೇ ಶಿವಾಪುರ ಗ್ರಾಮದಿಂದ ಸ್ವಾಮೀಜಿ ಇರುವ ಮಠಕ್ಕೆ ಭಕ್ತರ ದಂಡು ದಿನೇ ದಿನೇ ಬರುತ್ತಿದೆ.ಮಹಿಳಾ ಭಕ್ತರಂತೂ ಸ್ವಾಮೀಜಿಯವರಿಗೆ ಅನ್ಯಾಯವಾಗಿದೆ ಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ. ಸ್ವಾಮೀಜಿಯವರ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ನಿನ್ನೆ ಸ್ವಾಮೀಜಿ ಹಾಗೂ ಸ್ವಾಮೀಜಿ ಭಕ್ತರ ಕುರಿತು ದುರ್ಗಪ್ಪ ಎಂಬ ವ್ಯಕ್ತಿ ಅವಾಚ್ಯವಾಗಿ ಮಾತನಾಡಿದ್ದ ಕಾರಣಕ್ಕೆ ಸ್ವಾಮೀಜಿಗಳ ಭಕ್ತರ ಯ ಮೂಡಲಗಿ ಪೊಲೀಸ್ ಠಾಣೆಗೆ ನುಗ್ಗಿ ಅವಾಚ್ಯವಾಗಿ ಮಾತನಾಡಿದ ದುರ್ಗಪ್ಪನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನು ಇಂದು ಸ್ವಾಮೀಜಿ ಪರವಾಗಿ ಗೋಕಾಕನ ಎಪಿಎಂಸಿಯಲ್ಲಿ ಮಠದ ನೂರಾರು ಭಕ್ತರು ಸ್ವಾಮೀಜಿ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ.ಸ್ವಾಮೀಜಿಯವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಭಕ್ತರು ಹೇಳುತ್ತಿದ್ದು ಸ್ವಾಮೀಜಿಯವರ ಮೇಲಿನ ಆರೋಪ ಸಾಭೀತಾಗಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಸ್ವಾಮೀಜಿಯವರ ತೇಜೋವಧೆ ಮಾಡಿದವರ ವಿರುದ್ದ ಕ್ರಮವಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಕರಣ ಬೆಳಕಿಗೆ ಬಂದು ನಾಲ್ಕೈದು ದಿನಗಳು ಕಳೆದರೂ ಸಹ ತಮಗೆ ಅನ್ಯಾಯವಾಗಿದೆ ಎಂದು ಮಹಿಳೆಯಾಗಲಿ ಅಥಾವಾ ಸ್ವಾಮೀಜಿಯಾಗಲಿ ಮಠದ ಭಕ್ತರಾಗಲಿ ಪೊಲೀಸರಿಗೆ ದೂರು ನೀಡಿಲ್ಲ ಎನ್ನುವುದೇ ವಿಶೇಷ ಸಂಗತಿ. ಮಹಿಳೆಯ ಮೇಲೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆಯಾದರೂ ಸಹ ಪೊಲೀಸರೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲೂ ಮುಂದಾಗಿಲ್ಲ. ಸ್ವಾಮೀಜಿಯವರು ಗದ್ದುಗೆಯೊಳಗಿರುವ ಭಗವಂತನೇ ಇದಕ್ಕೆ ಪರಿಹಾರ ಕೊಡಲಿ ಎಂದು ಸುಮ್ಮನಾಗಿದ್ದು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿರುವುದಂತೂ ಸತ್ಯ ಸಂಗತಿಯಾಗಿದೆ.


