ರಾಜ್ಯ

ಕೇಂದ್ರ ಸಚಿವೆ ಹೆಸರು ಹೇಳಿ ಕೋಟ್ಯಂತರ ರೂ. ಪಂಗನಾಮ..!  

ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ..!
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಹೆಸರನ್ನು ಬಳಸಿಕೊಂಡು, ಬೇಕಾದಷ್ಟು ಸಾಲ ನೀಡುವುದಾಗಿ ಹಾಗೂ ಅರ್ಧದಷ್ಟು ಸಬ್ಸಿಡಿ ನೀಡುವುದಾಗಿ ಹೇಳಿ ಅಮಾಯಕರಿಂದ ಕೋಟಿ ರೂ. ಹಣ ಪಡೆದು ಮಹಿಳೆಯೊಬ್ಬಳು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ,
 
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಪವಿತ್ರಾ ಈ ಪ್ರಕರಣದ ಆರೋಪಿ. ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಮುಗ್ಧ ಜನರಿಗೆ ವಂಚಿಸಿದ್ದಾಳೆ.
 
ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಮೊದಲು ಈಕೆ ಜನರಿಗೆ ನಂಬಿಸಿದ್ದಾಳೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ತೋರಿಸಿದ್ದಾಳೆ. ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ನಂಬಿಸಿದ್ದಳು. ಸುಲಭವಾಗಿ ಸಾಲ ಕೊಡುತ್ತೇನೆ. ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ಹೇಳಿದ್ದಾಳೆ. ಆದರೆ ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕು ಎಂದು ಕಥೆ ಕಟ್ಟಿದ್ದಳು
ಇದನ್ನು ನಂಬಿದ ಜನರು ಒಂದು ಗುಂಪು ಮಾಡಿಕೊಂಡು ಈಕೆಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಸಿಕ್ಕ ಸಿಕ್ಕ ಕಡೆಗಳಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದರು. ತಿಂಗಳುಗಳು ಕಳೆದರೂ ಲೋನ್ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ಈಕೆ ವಂಚನೆ ಮಾಡಿದ್ದು, ನೂರಾರು ಮಂದಿಗೆ  ಪಂಗನಾಮ ಹಾಕಿದ್ದಾಳೆ.
 
ಸೂರ್ಯನಗರದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಕುರಿತು ಪ್ರಕರಣ ದಾಖಲಾಗಿದೆ. ವಂಚಕಿ ಪವಿತ್ರಾ ಹಾಗೂ ಆಕೆಯ ಸಹಚರರಾದ ಪ್ರವೀಣ್, ಯಲ್ಲಪ್ಪ, ಶೀಲಾ, ರುಕ್ಮಿಣಿ, ರಾಧಾ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಮಾರ್ಟಿನ್, ಹೇಮಲತಾ, ಶಾಲಿನಿ ಹಾಗೂ ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply