ಒಡಿಶಾದ ಕಟಕ್ ನಲ್ಲಿ ವಶಕ್ಕೆ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು.
ಬೆಂಗಳೂರು: ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದಾಗಿನಿಂದಲೇ ನಾಪತ್ತೆಯಾಗಿದ್ದ ಸ್ವಾಮೀಜಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಈ ನಡುವೆ ಸಿಸಿಬಿ ಪೊಲೀಸರು ಸ್ವಾಮೀಜಿಯ ಕಾರು ಚಾಲಕ ಹಾಗೂ ಮೂರ್ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಹಲವು ಮಾಹಿತಿಯನ್ನು ಪಡೆದುಕೊಂಡು ಕಾರನ್ನು ಜಪ್ತಿ ಮಾಡಿ ಸ್ವಾಮೀಜಿಯ ಬಂಧಿಸಲು ಶೋಧ ಮುಂದುವರೆಸಿದ್ದರು. ಅಭಿನವ ಹಾಲಶ್ರೀ ಸ್ವಾಮೀಜಿ ಒಡಿಶಾದ ಕಟಕ್ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಒಡಿಶಾ ಪೊಲೀಸರ ನೆರವಿನಿಂದ ಚಲಿಸುತ್ತಿದ್ದ ರೈಲಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡೆಗೂ ಅವರು ಒಡಿಶಾದಲ್ಲಿರುವುದಾಗಿ ಪೊಲೀಸರಿಗೆ ಸುಳಿವು ದೊರಕಿತ್ತು. ಈ ಸುಳಿವು ಅವರನ್ನು ಒಡಿಶಾದ ಕಟಕ್ ನಲ್ಲಿರುವ ಖಾಸಗಿ ಹೋಟೆಲೊಂದಕ್ಕೆ ಕೊಂಡೊಯ್ದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ತಂಡವೊಂದು ಕಟಕ್ ನ ಹೋಟೆಲಿಗೆ ಹೋಗಿ ನೋಡಿದಾಗ ಅವರಾಗಲೇ ಅಲ್ಲಿಂದ ಕಾಲ್ಕಿತ್ತಿದ್ದರು. ಅವರು ರೈಲಿನಲ್ಲಿ ಪ್ರಯಾಣಿಸತ್ತಿರುವುದಾಗಿ ಗೊತ್ತಾಗಿದ್ದು, ಅದೇ ರೈಲನ್ನು ಹತ್ತಿಕೊಂಡ ಪೊಲೀಸರು ರೈಲಿನಲ್ಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.