ಬೆಂಗಳೂರು, ಸೋಮವಾರದಿಂದ ಶುರುವಾದ ಒಳಮೀಸಲಾತಿ ಕಿಚ್ಚು ಈಗ ವಿಕೋಪ ಸ್ವರೂಪ ಪಡೆದಿದೆ. ದಿನ ದಿನಕ್ಕೆ ಒಳಮೀಸಲಾತಿ ವಿವಾದದ ಕಾಡ್ಗಿಚ್ಚು ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಮಂಗಳವಾರವೂ ವಿವಿಧ ಕಡೆ ಲಂಬಾಣಿ ಸಮುದಾಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ, ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ನಿನ್ನೆ ಸೋಮವಾರ ಅವರ ನಿವಾಸಕ್ಕೆ ಕಲ್ಲು ಎಸೆದು ಉದ್ವಿಗ್ನಗೊಂಡಿದ್ದ ಶಿಕಾರಿಪುರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಈ ಗಲಭೆಯ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದರೆ, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಲು ಅವರ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರೇ ಕಲ್ಲೆಸೆದಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಸೋಮವಾರದಿಂದ ಆರಂಭಗೊಂಡಿರುವ ಒಳಮೀಸಲಾತಿ ಕಿಚ್ಚು ಮಂಗಳವಾರವು ರಾಜ್ಯದಾದ್ಯಂತ ವ್ಯಾಪಿಸಿಕೊಂಡು ಅನೇಕ ಕಡೆ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿವೆ.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡಬಾರದು. ಇದು ನಮ್ಮ ಸಮುದಾಯದ ಮೀಸಲಾತಿಯನ್ನು ಕಿತ್ತು ಮತ್ತೊಬ್ಬರಿಗೆ ಕೊಡುವುದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಡ ಹಾಕಿದರು.
ಬಾಗಲಕೋಟೆ ಜಿಲ್ಲೆಯಲ್ಲೂ ಪ್ರತಿಭಟನೆಯ ಕಾವು ಜೋರಾಗಿದೆ. ಬೀಳಗಿ, ಹುನಗುಂದ ಸೇರಿದಂತೆ ಮತ್ತಿತರ 10ಕ್ಕೂ ಹೆಚ್ಚು ತಾಂಡಾಗಳಲ್ಲಿ ಪ್ರತಿಭಟನೆ ನಿರತರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುನಗುಂದ ತಾಲ್ಲೂಕಿನ ಅಮೀನಘಡ, ಘಜೇಂದ್ರಘಡ, ಅಚನೂರು, ನೀಲನಗರ ತಾಂಡ, ಬಾಗಲಕೋಟೆ ತಾಲ್ಲೂಕಿನ ಮುಚಕಂಡಿ, ಲವಳೇಶ್ವರ, ಉಳಬಾಳಾ, ಶಿರಕೊಪ್ಪ, ಬೀಳಗಿಯ ಜಟ್ರಮನೆ ತಾಂಡ ಮತ್ತಿತರ ಕಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಒಳಮೀಸಲಾತಿಯ ಕಿಚ್ಚು ದಿನ ಕಳೆದಂತೆ ರಾಜ್ಯಾದ್ಯಂತ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಕಾನೂನು ಮತ್ತೆ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್, ಗುಪ್ತಚರ ವಿಭಾಗದ ಮುಖ್ಯಸ್ಥ ಉಮೇಶ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಅವರಿಗೆ ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.