ಜನಸ್ನೇಹಿ ಪೊಲೀಸ್ ಆಡಳಿತ ನೀಡುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಬೆಳಗಾವಿ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಶನಿವಾರ ನಡೆಸಿದ 14ನೇ ಫೋನ್ ಇನ್ ಕಾರ್ಯಮದಲ್ಲಿ ಜಿಲ್ಲೆಯ ಜನರು ಕರೆ ಮಾಡಿ ಎಸ್ಪಿ ಎದುರು ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಂಡರು. ಒಟ್ಟು 64 ಕರೆಗಳು ಬಂದವು.
ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ಆಡಳಿತ ನೀಡುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದ ತಂಡದ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ, ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದಲೂ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.
ಸಾರ್ವಜನಿಕರ ಕರೆ ಸ್ವೀಕರಿಸಿದ ಎಸ್ಪಿ ನಮಸ್ಕಾರ್ರೀ.. ನಾನ ಎಸ್ಪಿ ಮಾತಾಡೋದು ಏನೀದೆ ನಿಮ್ಮ ಸಮಸ್ಯೆ ಎನ್ನುತ್ತಲೇ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಕಾಗವಾಡ ಮೂಳೆ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಬೋರವೆಲ್ ನ 300 ಮೀಟರ್ ಕೇಬಲ್ ಕಳ್ಳತನ ಮಾಡಿದ್ದಾರೆ. ಸಂಬಂಧಿಸಿದ ಪೊಲೀಸರಿಗೆ ತಿಳಿಸಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದ ಪೊಲೀಸ್ ಠಾಣೆಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಬಾಗ ಸುತ್ತಟ್ಟಿ ಗ್ರಾಮದ ವ್ಯಕ್ತಿ ಕರೆ ಮಾಡಿ, ನಮ್ಮ ಗ್ರಾಮದ ಸರಕಾರಿ ಶಾಲೆಯಲ್ಲಿ ಸುಮಾರು 150 ರಿಂದ 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಫಿಲ್ಟರ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ಜಿಪಂ ಸಿಇಓ ಗೆ ಪತ್ರ ಬರೆದು ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಚಿಕ್ಕೋಡಿ, ಗೋಕಾಕ , ಸವದತ್ತಿ, ಬೈಲಹೊಂಗಲ ತಾಲೂಕಿನ ವ್ಯಕ್ತಿ ಕರೆ ಮಾಡಿ, ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಸಹೋದರರು ಹಾಗೂ ಓರ್ವ ಮಹಿಳೆ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಬೈಲಹೊಂಗಲ ಪೊಲೀಸರಿಗೆ ಸೂಚನೆ ನೀಡಿ ಬಂದ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಟಿಳಕವಾಡಿ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಟಿಳಕವಾಡಿಯ ಎರಡನೇ ರೈಲ್ವೆ ಗೇಟ್ ಬಳಿ ಬ್ಯಾರಿಕ್ಯಾಡ್ ಅಳವಡಿಕೆ ಮಾಡಿದ್ದಾರೆ. ಅದು ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಹಲವಾರು ಬಾರಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾಡಳಿತ, ಪಾಲಿಕೆಗೆ ಮನವಿ ನೀಡಿದರೂ ಅದನ್ನು ತೆರವು ಮಾಡಿಲ್ಲ ಎಂದು ದೂರಿದರು. ಇದು ನಗರ ಪೊಲೀಸ್ ಇಲಾಖೆಗೆ ಬರುತ್ತದೆ. ಆಯುಕ್ತರಿಗೆ ತಿಳಿಸಲಾಗುವುದು ಎಂದರು.
ಶಾಲೆ, ಜಮೀನಿಗೆ ಹೋಗಲು ರಸ್ತೆ ಮಾಡಿಕೊಡುವುದು, ಸಂಚಾರ ಸಮಸ್ಯೆ, ಕೌಟುಂಬಿಕ ಕಲಹ, ಕುಡಿಯುವ ನೀರಿನ ಸಮಸ್ಯೆ ಹೊತ್ತು ಜನರು ಎಸ್ಪಿಗೆ ಕರೆ ಮಾಡಿ ದೂರಿದರು. ಎಲ್ಲ ಕರೆಗಳನ್ನು ಸ್ವೀಕರಿಸಿ ದೂರುಗಳಿಗೆ ಎಸ್ಪಿ ಸಂಜೀವ ಪಾಟೀಲ ಅವರ ತಂಡ ಸ್ಪಂದನೆ ನೀಡಿದ್ದು ವಿಶೇಷವಾಗಿತ್ತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಡಿಎಸ್ಪಿ ವೀರೇಶ ದೊಡಮನಿ, ಇನ್ಸ್ಪೆಕ್ಟರ್ ಗಳಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ವಿಠ್ಠಲ ಮಾದರ, ಶರಣಬಸಪ್ಪ ಅಂಜೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.