ಜೈಪುರ್:ಬುಧವಾರ ಜೈಪುರದಲ್ಲಿ ಪತ್ರಿಕೆಯೊಂದರ ಬೆಳ್ಳಿಹಬ್ಬದ ಸಂದರ್ಭದಲ್ಲಿ ಮಾತನಾಡಿದ ಠಾಕೂರ, ಇನ್ನು ಮುಂದೆ ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾನೂನನ್ನು ತರಲಿದೆ. ಈ ಹಿಂದೆ ಏಕಮುಖವಾಗಿ ಸುದ್ದಿ ಸಂವಹನ ನಡೆಯುತ್ತಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ಈಗ ಬಹು ಆಯಾಮಗಳಲ್ಲಿ ಸುದ್ದಿ ಸಂವಹನ ನಡೆಯುತ್ತಿದೆ ಎಂದರು.
ಮಾಧ್ಯಮದವರು ತಮ್ಮ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಹಾಗೂ ಭಯ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸುವುದನ್ನು ತಪ್ಪಿಸಬೇಕು ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರಾ, ಮಾಧ್ಯಮಗಳು ಪ್ರಜಾಪ್ರಭುತ್ವದ ದೊಡ್ಡ ಸಂದೇಶವಾಹಕಗಳು. ಸಾಂವಿಧಾನಿಕ ಮೌಲ್ಯ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಲಪಡಿಸುವುದು ಪತ್ರಿಕೋದ್ಯಮದ ಗುರಿಯಾಗಬೇಕು ಎಂದರು.