ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿದ ಘಟನೆ ತಡರಾತ್ರಿ ನಗರದಲ್ಲಿ ನಡೆದಿದೆ. ನಗರದ ಕೀರ್ತಿ ಹೊಟೇಲ್ ಪಕ್ಕ ಘಟನೆ ನಡೆದಿದ್ದು, ತಾರಿಹಾಳ ಗ್ರಾಮದ ನಾಗರಾಜ ಭೀಮಸಿ ಪಾಟೀಲ(28) ಮೃತ ಯುವಕ ಎಂದು ಗುರುತಿಸಲಾಗಿದೆ.
ಕುಡಿದ ಮತ್ತಿನಲ್ಲಿ ತೇಲಾಡುತ್ತ ಕೈಯಲ್ಲಿ ಚಾಕು ಹಿಡಿದು ಹೊರಟಿದ್ದ ಮಹಿಳೆಯನ್ನು ಬೈಕ್ ಸವಾರ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಗಲಾಟೆ ಸಂದರ್ಭದಲ್ಲಿ ಮಹಿಳೆ ಚಾಕುವಿನಿಂದ ಬೈಕ್ ಸವಾರನಿಗೆ ಇರಿದಿದ್ದಾಳೆ.
ಗಂಭೀರ ಗಾಯಗೊಂಡ ಬೈಕ್ ಸವಾರರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಕಂಗ್ರಾಳಿ ಕೆ. ಎಚ್. ಗ್ರಾಮದವಳೆನ್ನಲಾದ ಆರೋಪಿ ಮಹಿಳೆ ಜಯಶ್ರೀ ಪವಣ ಪವಾರ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.