ರಾಯಬಾಗ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಣ ರಂಗೇರಿದ್ದು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಶ್ರೀಮಂತ ಸಂಪ್ರದಾಯಗಳನ್ನು ಉಳಿಸುವುದರೊಂದಿಗೆ ಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಿರುವ ಪ್ರಮುಖ ರಾಜ್ಯ ಕರ್ನಾಟಕ. ಕರ್ನಾಟಕಕ್ಕೆ ಬಹಳಷ್ಟು ಅಭಿವೃದ್ದಿ ಮಾಡಬೇಕೆಂಬ ಆಸೆಯಿಂದ ಅವರ ಸೇವಕನಾಗಿ ಇಲ್ಲಿಗೆ ಬಂದಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಬಿಜೆಪಿ ಮಾತ್ರ ಸ್ಥಿರ ಮತ್ತು ಬಲಿಷ್ಠ ಸರ್ಕಾರವನ್ನು ನೀಡಬಲ್ಲದು. ಅದಕ್ಕಾಗಿಯೇ ಬಿಜೆಪಿ ಹೊಸ ಶಕ್ತಿ ಮತ್ತು ಹಳೆಯ ಅನುಭವದ ಹೊಸ ತಂಡವನ್ನು ರಚಿಸಿದ್ದು ಅದು ಕರ್ನಾಟಕದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿದೆ ಎಂದರು. ‘ಈ ಬಾರಿಯ ಸಂಕಲ್ಪ, ಬಹುಮತದೊಂದಿಗೆ ಬಿಜೆಪಿ ಸರ್ಕಾರ’ ಎಂದು ನಿರ್ಧರಿಸಿ ಸ್ವಾತಂತ್ರ್ಯದ ಸುವರ್ಣಯುಗದ ಕನಸುಗಳನ್ನು ಸಾಬೀತುಪಡಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮೋದಿ ಮನವಿ ಮಾಡಿದರು. ಮಾನವೀಯತೆಗೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಮಾರ್ಗವನ್ನು ತೋರಿಸುವ ಬಸವಣ್ಣ ನಮ್ಮ ನಂಬಿಕೆಯ ಕೇಂದ್ರ ಎಂದು ಹೇಳಿದ ಮೋದಿ, 2014 ರಲ್ಲಿ ನೀವು ಅವರಿಗೆ ಸೇವೆ ಮಾಡಲು ಅವಕಾಶ ನೀಡಿದ್ದರಿಂದ, ಬಸವಣ್ಣನ ಹಾದಿಯಲ್ಲಿ ಸಾಗುವ ಮೂಲಕ ಬಿಜೆಪಿ ಭ್ರಷ್ಟಾಚಾರ, ಹಿಂಸಾಚಾರದ ಕತ್ತಲೆಯನ್ನು ಹೋಗಲಾಡಿಸಿದೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಅರಾಜಕತೆ ಹೋಗಲಾಡಿಸಿದೆ ಎಂದರು.
ಇಲ್ಲಿನ ರಾಜಹಾನ್ಸ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅತಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಭಾಗ್ಯ ಬಿಜೆಪಿಗಿದೆ. ಮಾತೃಶಕ್ತಿಯ ಹೆಸರು ಬಂದಾಗ ಬೆಳಗಾವಿಯ ಹೆಸರು ಮೊದಲು ಬರುತ್ತದೆ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಅಮರ ಸ್ಫೂರ್ತಿ ನಮಗೆ ಸಿಕ್ಕಿದೆ ಎಂದು ಮೋದಿ ವೈಭವೋಪೇತವಾಗಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, . ಶ್ರೀಮಂತ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.