ಬೆಳಗಾವಿ:
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳಮಠದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ಮೇಲೆ ರಸ್ತೆ ಅಪಘಾತ ಸಂಭವಿಸಿದೆ.ಹೆದ್ದಾರಿಯ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಲಾರಿಯೊಂದ ಪಲ್ಟಿಯಾಗಿದ್ದು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಘಟನೆ ನಡೆದಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನ ಸಂಚಾರ ಸಂಪೂರ್ಣ ಅಸ್ತವಸ್ಥವಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಹೆದ್ದಾರಿಯ ಮೇಲೆಯೇ ಕಂಟೇನರ್ ಲಾರಿ ಉರುಳಿ ಬಿದ್ದಿದ್ದರಿಂದ ನೂರಾರು ಲಾರಿಗಳು ಸಾಲು ಗಟ್ಟಿ ನಿಂತಿವೆ. ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆಯ ಪೊಲೀಸರು ತೆರಳಿ ಬಿದ್ದಿರುವ ಲಾರಿ ಮೇಲಕ್ಕೆತ್ತುವ ಹಾಗೂ ಅದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಮಹಾನಗರಕ್ಕೆ ಪೊಲೀಸ್ ಆಯುಕ್ತರಾಗಿ ಭೂಷಣ್ ಭೋರಸೆ ಅವರು ಬಂದ ನಂತರ ಬಡೇ ಕೊಳ್ಳ ಮಠದ ಪಕ್ಕದ ತಿರುವಿನ ಹೆದ್ದಾರಿಯನ್ನು ರೆಡ್ ಜೋನ್ ಎಂದು ಗುರುತಿಸಿ ಹಲವು ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಅಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖ ಆಗುತ್ತಿಲ್ಲ. ಸದ್ಯ ಒಂದೇ ವಾರದ ಅವಧಿಯಲ್ಲಿ ಇದು 6ನೇಯ ಅಪಘಾತ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಡೇಕೊಳ್ಳಮಠದ ಬಳಿಯ ಹೆದ್ದಾರಿ ಎಂದರೇ ಅಪಘಾತದ ಹೆದ್ದಾರಿ ಎಂದು ಜನ ಕರೆಯುತ್ತಿದ್ದು ಜನ ಅಲ್ಲಿ ಓಡಾಡಲಿಕ್ಕೂ ಹೆದರುವ ಪರಿಸ್ಥಿತಿ ಇದೆ. ಹೀಗಾಗಿ ಪೊಲೀಸ್ ಇಲಾಖೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಅಪಘಾತಗಳನ್ನು ಕಡಿಮೆಗೊಳಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.












