ಶಿಕಾರಿಪುರ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಒಳ ಮೀಸಲಾತಿಯನ್ನು ಹೆಚ್ಚಿಸಿ, ರಾಜ್ಯ ಸರ್ಕಾರ ಮಾಡಿರುವ ಶಿಫಾರಸನ್ನು ವಿರೋಧಿಸಿ, ಬಂಜಾರ ಹಾಗೂ ಬೋವಿ ಸಮುದಾಯದ ನೂರಾರು ಜನರು ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ, ಯಡಿಯೂರಪ್ಪ ಅವರು ಇತ್ತೀಚೆಗಷ್ಟೆ ಕಟ್ಟಿದ ಹೊಸ ಮನೆಯ ಗಾಜುಗಳು ಸಂಪೂರ್ಣ ಪುಡಿಗಟ್ಟಲಾಗಿದೆ. ಹಲವಾರು ಪೊಲೀಸರು ಗಾಯಗೊಂಡಿದ್ದು, ಪ್ರತಿಭಟನಾ ನಿರತ ಮಹಿಳೆಯರಿಗೂ ಕಲ್ಲುಗಳು ಬಿದ್ದಿದ್ದರಿಂದ ಅವರೂ ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರನ್ನು ತಡೆಯಲು ಮೂರು ಕಡೆ ಪೊಲೀಸ್ ಬಂದ್ ಮಾಡಿದರೂ ಬ್ಯಾರಿಕೇಡ್ ಗಳನ್ನು ದಾಟಿ ನೂರಾರು ಜನರು ಮುನ್ನುಗ್ಗಿದ್ದಾರೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.