ಬೆಳಗಾವಿ: ಕನ್ನಡ ಹೋರಾಟಗಾರ ಹಾಗೂ ಉತ್ತರ ಕರ್ನಾಟಕದ ಹೆಮ್ಮೆಯ ನಟ ಅಭಿಲಾಷ್ ಅವರ ನೇತೃತ್ವದಲ್ಲಿ “ರಾಯಣ್ಣ ಸಮಾಧಿ ಚಲೋ”ಗೆ ನಟ ರಾಕ್ಷಸ ಡಾಲಿ ಧನಂಜಯ” ಅವರು ಆಗಮಿಸಿ ನಗರ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮಾ.30ರಂದು ತೆರೆಕಾಣಲಿರುವ ‘ಹೊಯ್ಸಳ’ ಚಿತ್ರದ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಅವರಿಗೆ ಅದ್ಧೂರಿ ಸ್ವಾಗತ ನೀಡಿದರು.
ಧನಂಜಯ್ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಹೊಯ್ಸಳ’ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರ ಬಿಡುಗಡೆಗೂ ಮುನ್ನ ಬೆಳಗಾವಿಗೆ ಭೇಟಿ ನೀಡಲು ಬಂದಿದ್ದೇನೆ. ‘ಹೊಯ್ಸಳ’ ಚಿತ್ರವು ಬೆಳಗಾವಿ ಮತ್ತು ಅಥಣಿ ಭಾಗಗಳಲ್ಲಿ ನಡೆಯುವ ಕಥೆಯಾಗಿದೆ. ಬೆಳಗಾವಿ, ಸಂಕೇಶ್ವರ, ಅಥಣಿಯಲ್ಲಿ ಒಂದೂವರೆ ತಿಂಗಳ ಕಾಲ ‘ಹೊಯ್ಸಳ’ ಚಿತ್ರೀಕರಣ ನಡೆಸಿದ್ದೇವೆ. ಇಂದು ನಂದಗಢದಲ್ಲಿರುವ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದೇನೆ. ನಂತರ ಸಂಜೆ ಬೈಲಹೊಂಗಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಶೂಟಿಂಗ್ ವೇಳೆ ಬೆಳಗಾವಿಯ ಜನ ಪ್ರೀತಿ ತೋರಿಸಿದ್ದಾರೆ. ಈ ಭಾಗದ ಜನರು ಕಲಾವಿದನನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರ ಹಿಂದೆ ದೊಡ್ಡ ಶಕ್ತಿಯಾಗಿ ನಿಲ್ಲುತ್ತಾರೆ ಆದ್ದರಿಂದ ದಯವಿಟ್ಟು ನಿಮ್ಮ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ‘ಹೊಯ್ಸಳ’ ಚಲನಚಿತ್ರವನ್ನು ನೋಡಿ ಆನಂದಿಸಿ ಎಂದರು.ಡಾಲಿ ಧನಂಜಯ ಅವರನ್ನು ವೀಕ್ಷಿಸಲು ಕನ್ನಡ ಚಿತ್ರಪ್ರೇಮಿಗಳು ಚನ್ನಮ್ಮ ವೃತ್ತದಲ್ಲಿ ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು.
ಇನ್ನು ಚಿತ್ರದ ಬಗ್ಗೆ ಹೇಳಬೇಕಾದರೆ ಧನಂಜಯ ನಟನೆಯ 25ನೇ ಸಿನೆಮಾ ಹೊಯ್ಸಳದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೊಯ್ಸಳ ಮಾರ್ಚ್ 30 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಉತ್ತರ ಕರ್ನಾಟಕದ ಹೆಮ್ಮೆಯ ನಟ ಅಭಿಲಾಷ್ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.