ಜಯ ಕರ್ನಾಟಕ ಸಂಘಟನೆಯಿಂದ ಡಿಸಿಗೆ ಮನವಿ
ಬೆಳಗಾವಿ: ಗಾಂಜಾ ಮತ್ತು ಪೆನ್ನಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ :ಇಂದು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದ ಕನ್ನಡ ಸಾಹಿತ್ಯ ಭವನದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಇತ್ತೀಚೆಗೆ ಗಾಂಜಾ ಮತ್ತು ಪೇನ್ನಿ ಚಟುವಟಿಕೆ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಇದರಿಂದ ದೇಶದ ಭವಿಷ್ಯ ಹಾಳಾಗುತ್ತಿದೆ. ಹಲವಾರು ಶಾಲಾ, ಕಾಲೇಜು ಮತ್ತು ಕೋಚಿಂಗ್ ಸೆಂಟರ್ಗಳ ಕಡೆ ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜೀವನ ಹಾಳಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಮಾರ್ಚ ಮತ್ತು ಎಪ್ರಿಲ್ ತಿಂಗಳಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತವೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಗಮನ ವಿದ್ಯಾಭ್ಯಾಸದ ಕಡೆಗೆ ಇರದೆ ಗಾಂಜಾ ಹಾಗೂ ಪೇನ್ನಿಯಂಥ ಮಾದಕ ವಸ್ತುಗಳ ಕೆಟ್ಟ ಚಟಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಇದರಿಂದ ಮುಂಬರುವ ವಿದ್ಯಾರ್ಥಿಗಳ ಜೀವನ ಹಾಳಾಗದಂತೆ ಕ್ರಮ ಕೈಗೊಂಡು ಮಾದಕ ವಸ್ತುಗಳ ಮಾರಾಟ ಮಾಡುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸಂಜಯ ರಜಪೂತ, ಸಂಜೀವ ವಾಜಂತ್ರಿ, ಗೌಸ್ ಸನದಿ, ಯುನಿಸ್ ಶಿಗೀಹಳ್ಳಿ, ಅರಬಾಜ ಮಕಾನದಾರ, ಸದಾನಂದ ಗೌಡರ, ವೆಂಕಟೇಶ ಅನಂಪೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.