ಬೆಳಗಾವಿ:
ಬೆಳಗಾವಿ ಜಿಲ್ಲೆಯ ರಾಮದುರ್ಗದದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟ್ ಬಳಿ ನಡೆದ ಅಪಘಾತದಲ್ಲಿ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಬೈಕ್ ಸವಾರ ಹಾಗೂ ಗೂಡ್ಸ್ ವಾಹನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಮದುರ್ಗ ಪಟ್ಟಣದ ನಿವಾಸಿ ಅರ್ಚಕ ವಿಜಯಕುಮಾರ್ ಘೋಡಬೋಲೆ (55) ಹಾಗೂ ಕಲಬುರಗಿ ಮೂಲಕ ಗೂಡ್ಸ್ ವಾಹನ ಚಾಲಕ ಅನೀಲ್ ಬಿರಾದಾರ್(23) ಸಾವನ್ನಪ್ಪಿದ್ದಾರೆ. ಹಾವೇರಿಯಿಂದ ರಾಮದುರ್ಗಕ್ಕೆ ಗೂಡ್ಸ್ ವಾಹನ ಬರುತ್ತಿತ್ತು ಎನ್ನಲಾಗಿದೆ. ಘಾಟ್ ನಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಹೊರಟಿದ್ದ ಅರ್ಚಕನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇನ್ನು ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.











