

ಬೆಳಗಾವಿ:
ಆಕೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಆತನ ಸಖ್ಯ ಬಯಸಿದ್ದಳು. ಇನ್ನು ಅವನಿನಿಗೂ ಮದುವೆಯಾಗಿ ಮೂರು ಮಕ್ಕಳಿದ್ದರೂ ಆಕೆಯ ಸಖ್ಯ ಬಯಸಿದ್ದ, ಎರಡು ವರ್ಷಗಳ ಕಾಲ ಈ ಸಖ್ಯ ಅವರಿಬ್ಬರ ಮಧ್ಯೆ ಇತ್ತು. ಆದರೆ ತನ್ನ ಪತ್ನಿ ಬೇರೊಬ್ಬ ಪುರುಷನ ಸಖ್ಯದಲ್ಲಿರುವುದನ್ನು ಮನಗಂಡ ಪತಿ ಪತ್ನಿಯ ಸಖ್ಯ ಬಯಸಿ ಬಂದ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದರು. ಆದರೆ ಮುಂದಾಗಿದ್ದು ಮಾತ್ರ ಅನಾಹುತ.
ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆಯಬಾರದ ಘೋರ ದುರಂತ ಒಂದು ನಡೆದು ಹೋಗಿದೆ. ಅನೈತಿಕ ಸಂಬಂಧದಲ್ಲಿದ್ದ ಪುರುಷ ತನ್ನ ಪ್ರೇಯಸಿಗೆ 9 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡು ಹತ್ಯೆಗೀಡಾದ ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ರೇಷ್ಮಾ ತಿರವೀರ(29) ಎಂದು ಗುರುತಿಸಲಾಗಿದ್ದು, ಆಕೆಗೆ ಚುಚ್ಚಿ ತಾನೂ ಆತ್ಮಹತ್ಯೆಗೀಡಾದವನನ್ನು ಆನಂದ ಸುತಾರ್(31) ಎಂದು ಗುರುತಿಸಲಾಗಿದೆ. ರೇಷ್ಮಾ ಹಾಗೂ ಆನಂದ ನಡುವೆ ಸಲುಗೆ ಬೆಳೆದಿತ್ತು. ಸಲುಗೆ ಮುಂದುವರೆದು ತಲುಪಬಾರದ ಹಂತ ತಲುಪಿತ್ತು. ಇದು ರೇಷ್ಮಾ ಪತಿಗೆ ಗೊತ್ತಾಗಿ ಆಕೆಯ ಮನೆಯಲ್ಲಿ ಕಲಹಕ್ಕೆ ಕಾರಣವಾಗಿತ್ತು.ಈ ಕುರಿತು ರೇಷ್ಮಾಳ ಪತಿ ನಂದಗಡ ಠಾಣೆಗೆ ದೂರು ನೀಡಿದ್ದ,ದೂರು ಸ್ವೀಕರಿಸಿದ ಪೊಲೀಸರು ಆನಂದನನ್ನು ಕರೆದು ಬುದ್ದಿವಾದ ಹೇಳಿ ಇನ್ನುಮುಂದೆ ರೇಷ್ಮಾಳ ತಂಟೆಗೆ ಹೋಗದಂತೆ ಹೇಳಿ ಕಳಿಸಿದ್ದರು. ಆದರೆ ಇದೇ ವಿಚಾರಕ್ಕೆ ಕೋಪಗೊಂಡಿದ್ದ ಆನಂದ ಮೊನ್ನೆ ತಡರಾತ್ರಿ ಭೇಟಿಯಾಗುವ ನೆಪದಲ್ಲಿ ರೇಷ್ಮಾ ಕರೆಸಿ ಆಕೆಗೆ ಬರೊಬ್ಬರಿ 9 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ, ರೇಷ್ಮಾ ಪ್ರಾಣ ಬಿಡುತ್ತಿದ್ದಂತೆ ತಾನೂ ಸಹ ಅದೇ ಚಾಕೂವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿದ್ದ, ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಕೂಡಲೇ ಬೆಳಗಾವಿ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದರು. ಆದರೆ ಮಾರ್ಗ ಮಧ್ಯೆಯೇ ಆನಂದ ಅಸುನೀಗಿದ್ದಾನೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಇತ್ತ ಆನಂದ ಹಾಗೂ ರೇಷ್ಮಾ ಮಕ್ಕಳು ತಮ್ಮ ತಮ್ಮ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.









