ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಮುಗಿಸಿಕೊಂಡು ಊರಿಗೆ ಹೊರಡುತ್ತಿದ್ದ ವೇಳೆ ಎಂ.ಕೆ. ಹುಬ್ಬಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೈಕ್ ಅಪಘಾತವಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಘಾತ ಸಂಭವಿಸಿದೆ. ಶವಗಳು ಬಿದ್ದ ಸ್ಥಳದಿಂದ ದ್ವಿಚಕ್ರ ವಾಹನ ಸುಮಾರು 300 ಮೀಟರ್ ದೂರದಲ್ಲಿ ಸಿಕ್ಕಿದೆ. ಮೃತಪಟ್ಟವರ ಹೆಸರು ಗೊತ್ತಾಗಿಲ್ಲ. ಇಬ್ಬರು ಯುವಕರು ಬೈಕ್ ಮೇಲೆ ವೇಗವಾಗಿ ಹೊರಟಿದ್ದರು. ಪಕ್ಕದ ಹೋಟೆಲ್ನಲ್ಲಿ ಊಟ ಮಾಡಿದ ಇನ್ನಿಬ್ಬರು ಇಬ್ಬರು ಯುವಕರು ರಸ್ತೆ ದಾಟುತ್ತಿದ್ದರು. ಪಾದಚಾರಿಗಳಿಗೆ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಹಾಗೂ ಪಾದಚಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.