ಗಡಿ ಪ್ರವೇಶಿಸುವ ಮುನ್ನವೇ ಮಹಾರಾಷ್ಟ್ರ ಪೊಲೀಸರು ವಶಕ್ಕೆ
ಚಿಕ್ಕೋಡಿ : ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನದ ಆಚರಣೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ನಾಡದ್ರೋಹಿ ಎಂಇಎಸ್ ನಾಯಕರನ್ನು ಜಿಲ್ಲೆಯ ಗಡಿ ಪ್ರವೇಶಿಸುವ ಮುನ್ನವೇ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲೇ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಪುಂಡರನ್ನು ಪೊಲೀಸ್ ವಾಹನದಲ್ಲಿ ವಾಪಸ್ ಕಾಗಲ್ಗೆ ಕರೆದುಕೊಂಡು ಹೋಗಿದ್ದಾರೆ
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಅರ್ಧ ಗಂಟೆ ಹೈಡ್ರಾಮಾ ಮಾಡುವ ಶಿವಸೇನೆ ಪುಂಡರು ಗಡಿ ವಿವಾದವನ್ನು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಅಸ್ತಿತ್ವವಿಲ್ಲದ ಕಂಗಾಲ್ ಕಂಪನಿಯಂತಾಗಿರುವ ಎಂಇಎಸ್ ಸಂಘಟನೆಗೆ ಪ್ರಚೋದನೆ ನೀಡಲು ರಾಜ್ಯಕ್ಕೆ ಆಗಮಿಸಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿ ಗಡಿಯಲ್ಲೇ ಮುಖಭಂಗ ಅನುಭವಿಸಿ ವಾಪಸ್ ಆಗಿದ್ದಾರೆ.
ಅನೇಕ ಬಾರಿ ಇದೇ ರೀತಿಯ ವಿಫಲ ಯತ್ನಕ್ಕೆ ಕೈ ಹಾಕುವ ಶಿವಸೇನೆ ಪುಂಡರು ಇದನ್ನೇ ನವೆಂಬರ್ ತಿಂಗಳಲ್ಲಿ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಅರ್ಧಗಂಟೆ ಕಾಲ ಹೈಡ್ರಾಮಾ ನಡೆಸುವ ಇವರು ಜಿಲ್ಲೆಯ ಹೊರಗೆ ಕುಳಿತು ಕರ್ನಾಟಕ ಸರ್ಕಾರದ ವಿರುದ್ಧ ಹಾಗೂ ಸ್ವಾಭಿಮಾನಿ ಕನ್ನಡಿಗರ ವಿರುದ್ಧ ಘೋಷಣೆ ಕೂಗಿ ಕಾಲು ಕೆದರಿ ಜಗಳಕ್ಕಿಳಿಯುವ ದುಷ್ಟ ಪರಿಪಾಟ ಮುಂದುವರೆಸಿಕೊಂಡು ಬಂದಿದ್ದಾರೆ
ರಾಜ್ಯದಲ್ಲೆ ಕನ್ನಡದ ಅಸ್ಮಿತೆಗೆ ಹಾಗೂ ಅದ್ದೂರಿ ರಾಜ್ಯೋತ್ಸವದ ಆಚರಣೆಗೆ ಹೆಸರಾಗಿರುವ ಬೆಳಗಾವಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ಹಬ್ಬ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಧಿಕಾಧಿಕಾರಿ ನಿತೇಶ್ ಪಾಟೀಲ್ ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿ ಪ್ರವೇಶಿಸದಂತೆ ನಿಷೇಧಿಸಿದ್ದರು.