ರಾಜ್ಯ

ಲಾರಿ-ಟಾಟಾ ಸುಮೋ ಡಿಕ್ಕಿ 13 ಮಂದಿ ಸಾವು 

ಚಿಕ್ಕಬಳ್ಳಾಪುರ, ಕುಟುಂಬದವರೊಂದಿಗೆ ಖುಷಿ ಖುಷಿಯಿಂದ ಹಬ್ಬ ಮುಗಿಸಿಕೊಂಡು ಕಾಯಕಕ್ಕೆ ಮರಳುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ 13 ಮಂದಿಯನ್ನು ಬಲಿತೆಗೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವತಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.
 
ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ಗಂಡು ಮಗು ಮೃತಪಟ್ಟಿದ್ದು,
ಕೆಲವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣಾ (40) ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರದ ಕೊತ್ತಚೆರಮ ನಿವಾಸಿ ಪೆರುಮಾಳ್, ಕಾವಲ್ ಬೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದ್ದು, ಉಳಿದವರ ಹೆಸರು, ವಿಳಾಸಕ್ಕಾಗಿ ಪೊಲೀಸರು ಮಾಹತಿ ಕಲೆ ಹಾಕುತ್ತಿದ್ದಾರೆ.
ಆಯುಧ ಪೂಜೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಸಂಭ್ರಮದಿಂದ ಕುಟುಂಬದವರೊಂದಿಗೆ ಹಬ್ಬ ಮಾಡಿಕೊಂಡು ರಾತ್ರಿ ಬೆಂಗಳೂರಿಗೆ ಮರಳಲು ಆಂಧ್ರದ ಕಡೆಯಿಂದ ಬರುತಿದ್ದ ಟಾಟಾಸುಮೋ ಹತ್ತಿದ್ದಾರೆ. ಆಂಧ್ರ ನೊಂದಣಿಯ ಟಾಟಾ ಸುಮೋ ಚಾಲಕ ಮಾರ್ಗಮಧ್ಯೆ ಬೇರೆ ಬೇರೆ ಊರಿನಲ್ಲಿ ಬೆಂಗಳೂರಿಗೆ ತೆರಳಲು ವಾಹನಕ್ಕಾಗಿ ರಸ್ತೆ ಬದಿ ಕಾಯುತ್ತಿದ್ದ ಜನರನ್ನು ಹತ್ತಿಸಿಕೊಂಡು ಒಟ್ಟು 13 ಮಂದಿಯನ್ನು ಕರೆದುಕೊಂಡು ಬಾಗೇಪಲ್ಲಿ -ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಅತೀ ವೇಗವಾಗಿ ಬರುತ್ತಿದ್ದನು.
 
 
ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಾವತಿಯ ಬಳಿ ಬರುತ್ತಿದ್ದಂತೆ ರಸ್ತೆ ಬದಿ ಯಾವುದೇ ಸೂಚನಾ ದೀಪ (ಬ್ಲಿಕಿಂಗ್ ಲೈಟ್) ಹಾಕದೆ ಸಿಮೆಂಟ್ ಬಲ್ಕರ್ ಲಾರಿ ನಿಲ್ಲಿಸಿರುವುದು ಚಾಲಕನ ಗಮನಕ್ಕೆ ಬಾರದೆ ವೇಗವಾಗಿ ಟಾಟಾ ಸುಮೋ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
TV24 News Desk
the authorTV24 News Desk

Leave a Reply