- ಕಳ್ಳರು ಕಾರಿನಲ್ಲಿ ಹಿರೇಬಾಗೇವಾಡಿ ಟೋಲ್ ಮೂಲಕ ಹಾದು ಹೋಗಿರುವುದು ಸಿಸಿ ಟಿವಿಗಳ ದೃಶ್ಯಾವಳಿಯಯಿಂದ ಗೊತ್ತಾಗಿದೆ.
- ಗುರುತು ಸಿಗಬಾರದೆಂದು ಡಕಾಯಿತರು ಮುಖಕ್ಕೆ ಮುಸುಕು ಹಾಕಿಕೊಂಡು ಕೃತ್ಯವೆಸಗಿದ್ದರು , ಮರಾಠಿ ಭಾಷೆ ಮಾತನಾಡುತ್ತಿದ್ದರು.
- ಈ ದೃಶ್ಯಾವಳಿಗಳನ್ನು ಆಧರಿಸಿ ಡಕಾಯಿತರು ಹಾಗೂ ಕಾರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ಮುಸುಕುದಾರಿ ಡಕಾಯಿತರ ತಂಡ ಮನೆಯವರನ್ನು ಕಟ್ಟಿ ಹಾಕಿ ಬೆದರಿಸಿ 25 ಲಕ್ಷ ಹಣ ಸೇರಿದಂತೆ 75 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ದೋಚಿ ಮಾಲೀಕನ ಕಾರನ್ನೇ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಇಲ್ಲಿನ ಬಸವೇಶ್ವರ ನಗರದ ಲಕ್ಷ್ಮೀಲೇಔಟ್ನಲ್ಲಿ ಉಲ್ಲಾಸ ದೊಡ್ಡಮನಿ ಎಂಬುವರ ಮನೆ ಇದ್ದು, ಇವರು ವಿದ್ಯಾಮಂದಿರ ಬುಕ್ ಡಿಪೊ ಮಾಲೀಕರು. ಉಲ್ಲಾಸ ದೊಡ್ಡಮನಿ ಅವರ ಮನೆಯಲ್ಲಿ ಒಟ್ಟು ಐದು ಮಂದಿ ವಾಸವಾಗಿದ್ದು, ರಾತ್ರಿ ಊಟ ಮಾಡಿ ಎಲ್ಲರೂ ನಿದ್ರೆಗೆ ಜಾರಿದ್ದಾರೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ 7ರಿಂದ 8 ಮಂದಿಯ ಡಕಾಯಿತರ ತಂಡವೊಂದು ಇವರ ಮನೆ ಬಳಿ ಬಂದು ಕಿಟಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಆ ಮೂಲಕ ಒಳಗೆ ನುಗ್ಗಿದ್ದಾರೆ.
ಏನೋ ಶಬ್ದವಾಗುತ್ತಿದೆ ಎಂದು ಎಚ್ಚರಗೊಂಡ ಮನೆ ಸದಸ್ಯರನ್ನು ಕಿರುಚದಂತೆ ಹೆದರಿಸಿ, ಎಲ್ಲರ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡು ಸ್ವಿಚ್ ಆಫ್ ಮಾಡಿ ನಂತರ ಕೈಕಾಲುಗಳನ್ನು ಕಟ್ಟಿಹಾಕಿ ಮನೆಯನ್ನೆಲ್ಲಾ ಶೋಧಿಸಿ 25 ಲಕ್ಷ ಹಣ ಹಾಗೂ 700 ಗ್ರಾಂ ಚಿನ್ನಾಭರಣ ದೋಚಿಕೊಂಡು ಉಲ್ಲಾಸ ದೊಡ್ಡಮನಿ ಅವರ ಕಾರಿನ ಕೀ ಪಡೆದು ಆ ಕಾರಿನಲ್ಲೇ ಡಕಾಯಿತರು ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಕೈಕಾಲುಗಳಿಗೆ ಕಟ್ಟಿದ್ದ ಹಗ್ಗವನ್ನು ಒಬ್ಬರನ್ನೊಬ್ಬರ ಸಹಾಯದಿಂದ ಬಿಡಿಸಿಕೊಂಡು ಅಕ್ಕ-ಪಕ್ಕದವರಿಗೆ ನಡೆದ ಘಟನೆಯನ್ನು ತಿಳಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗೋಕುಲ ರೋಡ್ ಠಾಣೆ ಪೊಲೀಸರು ಡಕಾಯಿತರ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.