ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರೂ ಆಗಿರುವ ನಾಳೆ ನೂತನ ಸರ್ಕಾರದ ಮಹತ್ವಾಕಾಂಕ್ಷಿ ಬಜೆಟ್ ಮಂಡಿಸಲಿದ್ದು, ಶ್ರೀಮಂತ ವರ್ಗಕ್ಕೆ ಕರ ಭಾರವಾಗಿರುವ ಮುನ್ಸೂಚನೆಗಳು ಕಂಡುಬಂದಿವೆ. 14ನೇ ಬಾರಿಗೆ ರಾಜ್ಯ ಸರ್ಕಾರದ ಆಯವ್ಯಯ ಮಂಡಿಸಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ದೂರದೃಷ್ಟಿ ಆಲೋಚನೆಗಳನ್ನು ಕ್ರೂಢೀಕರಿಸಿ ಬಜೆಟ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಕಾಂಗ್ರೆಸ್ ಸರ್ಕಾರಕ್ಕೆ ಪಂಚಖಾತ್ರಿಗಳ ಅನುಷ್ಠಾನ ಆರ್ಥಿಕ ಸವಾಲನ್ನು ತಂದೊಡ್ಡಿದೆ. ಇದನ್ನು ಸಮರ್ಥವಾಗಿ ನಿಬಾಯಿಸುವ ಮೂಲಕ ಯಶಸ್ವಿ ಆರ್ಥಿಕ ಮಂತ್ರಿಯಾಗಿದ್ದು, ಸಿದ್ದರಾಮಯ್ಯ ಅವರ ಅನುಭವಕ್ಕೆ ಪಾಟಿ ಸವಾಲಾಗಿದೆ.ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಿಸಿದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿ, ಶಕ್ತಿ ಯೋಜನೆಗಳಿಗೆ ವಾರ್ಷಿಕ ಸರಿಸುಮಾರು 59 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.
ಪ್ರಸಕ್ತ ವರ್ಷ ಈಗಾಗಲೇ ಮೂರ್ನಾಲ್ಕು ತಿಂಗಳು ಕಳೆದಿರುವುದರಿಂದ ಬಾಕಿ ಉಳಿದ ಅವಗೆ ಯೋಜನೆಗಳನ್ನು ಜಾರಿಗೊಳಿಸಲು ಕನಿಷ್ಟ 35 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.ಈಗಾಗಲೇ ಕಳೆದ ಫೆಬ್ರವರಿಯಲ್ಲಿ ಹಿಂದಿನ ಹಣಕಾಸು ಸಚಿವರೂ ಆಗಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ 3ಲಕ್ಷ 9ಸಾವಿರ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿ ಲೇಖಾನುದಾನ ಪಡೆದುಕೊಂಡಿದ್ದಾರೆ.
ಆ ವೇಳೆ ಒಂದಷ್ಟು ಹೊಸ ಯೋಜನೆಗಳನ್ನು ಘೋಷಿಸಿದ ಬಸವರಾಜು ಬೊಮ್ಮಾಯಿ ಅವರು ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಅಲ್ಲಲ್ಲಿಗೆ ಹೊಂದಾಣಿಕೆ ಮಾಡಿ ಬಜೆಟ್ ಮಂಡಿಸಿದ್ದರು.ಹೀಗಾಗಿ ಪ್ರಸಕ್ತ ಸರ್ಕಾರಕ್ಕೆ ಹೊಸ ಆದಾಯದ ಮೂಲಗಳೇ ಇಲ್ಲವಾಗಿವೆ. ಬಹುತೇಕ ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿ ಅನುಷ್ಠಾನಗೊಳ್ಳದ ಯೋಜನೆ ಬಗ್ಗೆ ಸಿದ್ದರಾಮಯ್ಯ ಸರ್ಕಾರ ತಿಲಾಂಜಲಿ ನೀಡುವ ಸಾಧ್ಯತೆ ಇದೆ.