ಬೆಂಗಳೂರು: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಗೆ ಈ ತಿಂಗಳ 25ರೊಳಗೆ ಅರ್ಜಿ ಸಲ್ಲಿಸದೇ ಇದ್ದರೆ ಜುಲೈ ತಿಂಗಳ ವಿದ್ಯುತ್ ಶುಲ್ಕವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಯಶಸ್ವಿಯಾಗಿ ಜಾರಿಯಾಗಲಿದೆ. ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿವೆ. ಆರಂಭದಲ್ಲಿ ಮೂರ್ನಾಲ್ಕು ದಿನ ಎಲ್ಲರೂ ಒಮ್ಮೆಲೆ ಅರ್ಜಿ ಹಾಕಲು ಮುಂದಾದ ಕಾರಣ ಸರ್ವರ್ ಸಮಸ್ಯೆ ಎದುರಾಗಿತ್ತು. ಈಗ ಯಾವುದೇ ತೊಂದರೆಯಿಲ್ಲ ಎಂದರು.
ಈಗಾಗಲೇ ತಿಳಿಸಿರುವಂತೆ ಜು.1 ರಿಂದ ಉಚಿತ ವಿದ್ಯುತ್ ಸೌಲಭ್ಯ ಫಲಾನುಭವಿಗಳಿಗೆ ದೊರೆಯಲಿದೆ. ಜೂನ್ ತಿಂಗಳಿನಲ್ಲಿ ಬಳಕೆ ಮಾಡಿದ ವಿದ್ಯುತ್ನ ಬಿಲ್ ಅನ್ನು ಫಲಾನುಭವಿಗಳು ಈ ತಿಂಗಳು ಪಾವತಿ ಮಾಡಬೇಕು. ಜುಲೈನಲ್ಲಿ ಬಳಕೆಯಾದ ವಿದ್ಯುತ್ನ ಬಿಲ್ ಅನ್ನು ಅರ್ಹ ಫಲಾನುಭವಿಗಳಿಗೆ ಆಗಸ್ಟ್ನಿಂದ ಸರ್ಕಾರವೇ ಭರಿಸಲಿದೆ. ಈ ತಿಂಗಳ ಉಚಿತ ವಿದ್ಯುತ್ನ ಸೌಲಭ್ಯ ಪಡೆದುಕೊಳ್ಳಬೇಕಾದರೆ ಜುಲೈ 25ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಈವರೆಗೂ 86.5 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಆದರೆ ಆಯಾ ತಿಂಗಳ ಸೌಲಭ್ಯ ಪಡೆದುಕೊಳ್ಳಲು ಅರ್ಜಿಯ ಫಲಾನುಭವಿಗಳು ಶೀಘ್ರವಾಗಿ ಅರ್ಜಿ ಸಲ್ಲಿಸುವುದು ಅನಿವಾರ್ಯ. ಅರ್ಜಿ ಸಲ್ಲಿಕೆಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಲಾಗುವುದು. ಫಲಾನುಭವಿಗಳು ಬೆಸ್ಕಾಂ ಕಚೇರಿಗಳ ಬಳಿಯಲ್ಲೂ ಹೋಗಿ ಸಲಹೆ ಪಡೆದು ಅರ್ಜಿ ದಾಖಲಿಸಬಹುದು ಎಂದರು.