ಧಾರವಾಡ

ಹೆಲಿಕಾಫ್ಟರ್ ರೆಡಿ: ಜಗದೀಶ್ ಶೆಟ್ಟರ ಕಾಂಗ್ರೆಸ್ ಸೇರ್ಪಡೆ..?  

ಹುಬ್ಬಳ್ಳಿ : ಬಿಜೆಪಿ ವಿರುದ್ಧ ಸೆಟೆದು ನಿಂತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಗಾಳ ಹಾಕಿದ್ದು, ಬಹುತೇಕ ಅವರು ಪಕ್ಷ ಸೇರುವುದು ಖಚಿತವಾಗಿದೆ.
ಕಾಂಗ್ರೆಸ್‍ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ಇಂದು ಜಗದೀಶ್ ಶೆಟ್ಟರ್ ಅವರನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಕುಟುಂಬದ ಸದಸ್ಯರ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುವುದಾಗಿ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಗದೀಶ್ ಶೆಟ್ಟರ್ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಅವರ ಜೊತೆ ಕಾಂಗ್ರೆಸ್ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ. ಜೆಡಿಎಸ್ ನಾಯಕರು ಕೂಡ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದ್ದು, ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಶೆಟ್ಟರ್ ಕಾಂಗ್ರೆಸ್‍ನತ್ತಲೇ ಮುಖ ಮಾಡಿದ್ದಾರೆ ಎಂಬ ವದ್ಧಂತಿಗಳಿವೆ.
ಇದಕ್ಕೆ ಪೂರಕವಾಗಿ ಡಿ.ಕೆ.ಶಿವಕುಮಾರ್ ಅವರ ಆಪ್ತರೊಬ್ಬರು ವಿಶೇಷ ಹೆಲಿಕಾಫ್ಟರ್ ಅನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಅದನ್ನು ಶೆಟ್ಟರ್ ಬೆಂಗಳೂರು ಪ್ರಯಾಣಕ್ಕೆ ಅನುಕೂಲವಾಗುವಂತೆ ಹುಬ್ಬಳ್ಳಿಯಲ್ಲಿ ನಿಲ್ಲಿಸಲಾಗಿದೆ.
ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶೇಶ್ವೇರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶೆಟ್ಟರ್ ಹೆಲಿಕಾಫ್ಟರ್‍ನಲ್ಲಿ ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸಂಜೆ ಬೆಂಗಳೂರಿನಲ್ಲಿ ತಂಗುವ ರಾಹುಲ್‍ಗಾಂಧಿಯವರ ಜೊತೆ ಶೆಟ್ಟರ್ ಅವರನ್ನು ಭೇಟಿ ಮಾಡಿಸಲು ಎಲ್ಲಾ ತಯಾರಿಗಳು ನಡೆದಿವೆ.
ಶೆಟ್ಟರ್ ಕಾಂಗ್ರೆಸ್‍ಗೆ ಬಂದರೆ ಸ್ವಾಗತಿಸುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆಯೇ ಬಹಿರಂಗವಾಗಿ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಹಸ್ಯ ಸ್ಥಳಕ್ಕೆ ತೆರಳಿ ಸದ್ದಿಲ್ಲದೆ ಆಪರೇಷನ್ ನಡೆಸಿದ್ದು, ಶೆಟ್ಟರ್ ಅವರನ್ನು ಸೆಳೆಯಲು ಕಾರ್ಯಾಚರಣೆ ನಡೆಸಿದ್ದರು. ಅದರ ಪರಿಣಾಮ ಕಿತ್ತೂರು ಕರ್ನಾಟಕ ಭಾಗದ ಹಿರಿಯ ನಾಯಕ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದರೆ ದೊಡ್ಡ ಶಕ್ತಿಯೊಂದು ಸೇರ್ಪಡೆಯಾದಂತಾಗುತ್ತದೆ ಎಂಬ ಅಂದಾಜುಗಳಿವೆ
TV24 News Desk
the authorTV24 News Desk

Leave a Reply