ಬೆಳಗಾವಿ:ಸಾಲದ ಸುಳಿಯಲ್ಲಿ ಸಿಲುಕಿದ್ದ ಪತಿ ತಮ್ಮನ್ನೆಲ್ಲ ಬಿಟ್ಟು ಹೋಗಿದ್ದರಿಂದ ದಿಕ್ಕು ತೋಚದ ಮಹಿಳೆಯೊಬ್ಬರು ತಾನು ವಿಷವುಂಡು ಮತ್ತು ತನ್ನ ಮೂವರ ಮಕ್ಕಳಿಗೆ ವಿಷ ಉಣಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವಿಶ್ವ ಮಹಿಳಾ ದಿನದಂದೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡಿದಿರುವುದು ದುರಂತ. ಇಂದು ಮಹಿಳೆಯೊಬ್ಬಳು ತನ್ನ ಮೂವರ ಮಕ್ಕಳ ಜೊತೆ ಜಿಲ್ಲಾಧಿಕಾರಿಗೆ ಭೇಟಿಯಾಗಿ ತಮ್ಮ ಅಳಲುನ್ನ ತೋಡಿಕೊಳ್ಳಲು ಬಂದಿದ್ದರು.ಆದರೆ ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಪತಿ ಬಿಟ್ಟು ಹೋಗಿದ್ದರಿಂದ ಜುಗುಪ್ಸೆಗೊಂಡಿದ್ದ ಮಹಿಳೆ ಇಂದು ಜಿಲ್ಲಾಧಿಕಾರಿಗೆ ಭೇಟಿ ಮಾಡುವ ಮುಂಚೆ ವಿಷ ಬೇರಿಸಿದ ಜ್ಯೂಸ್ ಕುಡಿದು ಬಂದಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ಮಹಿಳೆ ಏಕಾಏಕಿ ವಾಂತಿ ಮಾಡಿಕೊಳ್ಳುತ್ತಿರುವಾಗ ಅಲರ್ಟ ಆದ ಡಿಸಿ ಆಫೀಸ್ ಸಿಬ್ಬಂದಿಗಳು ಸಕಾಲಕ್ಕೆ ಅವರನ್ನ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಇದರಿಂದಾಗಿ ಸದ್ಯ ನಾಲ್ಕೂ ಜನ ಬಚಾವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜನತಾ ಪ್ಲ್ಯಾಟ್ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ(೪೦) ಎಂಬವರೇ ಆತ್ಮಹತ್ಯೆಗೆ ಯತ್ನಸಿದ ಮಹಿಳೆ ಆಕೆ ತನ್ನ ಜೊತೆಗೆ ಮಕ್ಕಳಾದ ಸೃಷ್ಟಿ(೧೪), ಸಾಕ್ಷಿ(೮) ಸಾನ್ವಿ(೩) ಅವರಿಗೆ ಫಿನೈಲ್ ಕುಡಿಸಿದ್ದಾಳೆ.
ಸರಸ್ವತಿಯ ಪತಿ ಅದೃಶ್ಯಪ್ಪ ಹಂಪಣ್ಣವರ ಕಳೆದ ಹಲವು ವರ್ಷಗಳಿಂದ ಆನಗೋಳದ ಸಲೂನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಸರಸ್ವತಿ ಮತ್ತು ಪತಿ ಮಕ್ಕಳೊಂದಿಗೆ ಆನಗೋಳದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ನಡುವೆ ಅದೃಶ್ಯಪ್ಪ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದಂತೆ.
ಸಾಲದ ಕಿರುಕುಳ ತಾಳಲಾರದೆ ಅದೃಶ್ಯಪ್ಪ ಕಳೆದ ೧೫ ದಿನಗಳ ಹಿಂದೆಯೇ ಪತ್ನಿ ಮೂವರ ಮಕ್ಕಳನ್ನು ಬಿಟ್ಟು ಹೋಗಿದ್ದಾನೆ. ಈ ನಡುವೆ ತುತ್ತು ಅನ್ನಕ್ಕೂ ಗತಿಯಿಲ್ಲದೆ ಸರಸ್ವತಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಮಕ್ಕಳ ಜೊತೆ ಬಂದಿದ್ದರು.
ಈ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಹಿಳೆಯನ್ನು ವಿಚಾರಿಸಿದ್ದಾರೆ. ಅಷ್ಟು ಹೊತ್ತಿಗೆ ಅಲ್ಲೇ ಇದ್ದ ಹಿರಿಯ ಪುತ್ರಿ ಸೃಷ್ಟಿ ತಮ್ಮತಾಯಿ ಮನೆಯಿಂದ ಬರುವಾಗ ಏನೋ ಜ್ಯೂಸ್ ಕುಡಿಸಿದ್ದಾರೆಂದು ಎಂದು ಹೇಳಿಕೊಂಡಿದ್ದಾಳೆ. ಅಷ್ಟು ಹೊತ್ತಿಗೆ ಸರಸ್ವತಿ ಮತ್ತು ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆನ್ನಲಾಗಿದೆ.
ಕೂಡಲೇ ಎಚ್ಚೆತ್ತಕೊಂಡು ಕಚೇರಿಯ ಸಿಬ್ಬಂದಿಗಳು ನಾಲ್ವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದೀಗ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಸದ್ಯ ಅವರಿಗೆ ಜಿಲ್ಲಾಡಳಿತ ಯಾವ ನೆರವನ್ನು ನೀಡಲಿದೆ ಎಂದು ಕಾದ ನೋಡಬೇಕಾಗಿದೆ.