ಬೆಳಗಾವಿ: 90 ವರ್ಷದ ವೃದ್ಧೆಯೊಬ್ಬರನ್ನ ಅವರ ಸಂಬಂಧಿಕರು ಅರಣ್ಯದಲ್ಲಿ ಬಿಟ್ಟು ಹೋಗಿರುವ ಘಟನೆ ಖಾನಾಪುರ ತಾಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ ನಡೆದಿದೆ.
ಈ ವೃದ್ಧೆ ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಕುಟುಂಬದವರೇ ಅವರನ್ನು ಅರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಕಾಡಿನ ಕೂಗಳತೆಯ ಗ್ರಾಮದ ಜನ ತಿಳಿಸಿದ್ದಾರೆ. ರುಮೇವಾಡಿ ಗ್ರಾಮದ ರೈತ ರಾಜು ಘಾಡಿ ಎನ್ನುವವರು ಸೋಮವಾರ ಕಾಡಿನ ದಾರಿಯಲ್ಲಿ ಹೊರಟಿದ್ದಾಗ ವೃದ್ಧೆ ನರಳಾಡುವ ಶಬ್ದ ಕೇಳಿದೆ. ನಂತರ ಹತ್ತಿರ ಹೋಗಿ ನೋಡಿದ ವೃದ್ಧೆ ಮಲಗಿರುವುದು ಕಂಡು ಬಂದಿದೆ. ನಂತರ ರಾಜು ಎಂಬುವರು ವೃದ್ಧೆಗೆ ನೀರು ಕುಡಿಸಿ ಉಪಚರಿಸಿದ್ದಾರೆ. ನಂತರ ತಮ್ಮ ಟ್ರ್ಯಾಕ್ಟರ್ನಲ್ಲಿ ಅವರನ್ನು ಹತ್ತಿರದ ಧಾಬಾಗೆ ಕರೆತಂದು ನಂತರ ಆಂಬುಲೆನ್ಸ್ ಕರೆ ಮಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೃದ್ಧೆ ನಾಲ್ಕು- ಐದು ದಿನಗಳಿಂದ ಏನನ್ನೂ ತಿಂದಿಲ್ಲ ನೀರೂ ಕುಡಿದಿಲ್ಲ. ತೀವ್ರ ನಿತ್ರಾಣಗೊಂಡ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ತಾನು ಮುಧೋಳದವಳು ಎಂದಷ್ಟೇ ಹೇಳಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ತಿಳಿಸಿದ್ದಾರೆ.