ಚಿಕ್ಕೋಡಿ:ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಮತ್ತು ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳ ಮುಂದಾಳತ್ವದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿಸಿದರು.
ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಮಾಡಬೇಕು. ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಕುರಿತು ಧ್ವನಿ ಎತ್ತಲಾಗುವುದು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಜಿಲ್ಲೆಯಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿದರೇ ಗಡಿಯಲ್ಲಿನ ಹಳ್ಳಿಗಳ ಪ್ರಗತಿಗೆ ಅನುಕೂಲವಾಗಲಿದೆ. ಜಿಲ್ಲೆ ಮಾಡಿದರೇ ಸರಕಾರದಿಂದ ಹೆಚ್ಚಿನ ಅನುದಾನ ಬರುತ್ತದೆ. ಇದರಿಂದ ಇನ್ನಷ್ಟು ಪ್ರಗತಿಗೆ ಸಹಕಾರಿಯಾಗಲಿದೆ ಆದ್ದರಿಂದ ಸರಕಾರ ಕೂಡಲೇ ಚಿಕ್ಕೋಡಿ ಜಿಲ್ಲಾ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಹೋರಾಟ ಸಮಿತಿ ಮುಖಂಡ ಎಸ್.ವೈ.ಹಂಜಿ ಮಾತನಾಡಿ, ಚಿಕ್ಕೋಡಿ ಜಿಲ್ಲಾ ಘೋಷಣೆಯಾಗಬೇಕಾದರೇ ಈ ಭಾಗದ ಜನಪ್ರತಿನಿಗಳು ಆಸಕ್ತಿ ತೋರಬೇಕಾದ ಅಗತ್ಯವಿದೆ. ಕೇವಲ ಚುನಾವಣೆ ಬಂದಾಗ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿಸುತ್ತೇವೆಂದು ಹೇಳದೇ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಭಾಗದ ಎಲ್ಲ ಜನಪ್ರತಿನಿಗಳು ಒಗ್ಗಟ್ಟಿನಿಂದ ಸರಕಾರದ ಮೇಲೆ ಒತ್ತಡ ಹೇರಬೇಕು. ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿಸಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ಕಾಶಿನಾಥ ಕುರಣೆ, ಸಂಜು ಬಡಿಗೇರ, ಮುದ್ದುಸಾರ ಜಮಾದಾರ, ಚಂದ್ರಕಾಂತ ಹುಕ್ಕೇರಿ, ತ್ಯಾಗರಾಜ ಕದಮ, ತುಕಾರಾಮ ಕೋಳಿ, ನಾಗೇಶ ಮಾಳಿ, ಬಸವರಾಜ ಡಾಕೆ, ಎಚ್.ಎಸ್.ನಸಲಾಪುರೆ, ಸುರೇಶ ಬ್ಯಾಕುಡೆ, ರವಿ ಮಾಳಿ, ರುದ್ರಪ್ಪಾ ಸಂಗಪ್ಪಗೋಳ, ಎಂ.ಎ.ಪಾಟೀಲ, ರಾಯ ಜಾಧವ, ರಾಮಾ ಮಾನೆ, ನರೇಂದ್ರ ನೇರ್ಲಿಕರ, ಅನೀಲ ಮಾನೆ, ಸಾಬೀರ ಜಮಾದಾರ,ಗುಲಾಬಹುಸೇನ ಜಮಾದಾರ, ಈರ್ಫಾನ ಬೇಪಾರಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಚಿಕ್ಕೋಡಿ ತಹಶೀಲ್ದಾರ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.