ಬೆಳಗಾವಿ:
ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಮಹಾ ಮಳೆ ಸದ್ಯ ಜಿಲ್ಲೆಯ ಜೀವನದಿಗಳಿಗೆ ಜೀವಕಳೆ ತಂದಿದೆ. ಕಳೆದ ತಿಂಗಳು ಕೊಂಚ ಅಬ್ಬರಿಸಿ ತಣ್ಣಗಾಗಿದ್ದ ಮಳೆರಾಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಪರಿಣಾಮವಾಗಿ ಘಟಪ್ರಭಾ,ಮಲಪ್ರಭಾ, ನದಿಗಳಿಗೆ ಜೀವಕಳೆ ಬಂದಿದ್ದು ನದಿಗಳು ಮೈದುಂಬಿಕೊಂಡಿವೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗೋಕಾಕ ಜಲಪಾತಕ್ಕೆ ಜೀವ ಕಳೆ ಬಂದಿದ್ದು ಪ್ರವಾಸಿಗರನ್ನು ಗೋಕಾಕ ಜಲಪಾತ ಕೈ ಬೀಸಿ ಕರೆಯುತ್ತಿದೆ. ಸುಮಾರು 171 ಅಡಿಗಳಿಂದ ಕೆಳಗೆ ಬೀಳುವ ಜಲರಾಶಿಯು ನೋಡುಗರಿಗೆ ಹಾಲ್ನೊರೆಯಂತೆ ಭಾಸವಾಗುತ್ತದೆ. ಪೃಕೃತಿಯ ಸೊಬಗಿನ ಮಧ್ಯೆ ಹಾಲೇ ಮೇಲಿನಿಂದ ಸುರಿಯುತ್ತಿದೆ ಎನೋ ಎಂಬಂತೆ ಭಾಸವಾಗುತ್ತದೆ. ಭಾರತದ ನಯಾಗರಾ ಫಾಲ್ಸ್ ಎಂದೇ ಖ್ಯಾತಿ ಹೊಂದಿರುವ ಗೋಕಾಕ ಜಲಪಾತವೂ ಸಹ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಗೋವಾ ರಾಜ್ಯದ ಪ್ರವಾಸಿಗರನ್ನೂ ಸಹ ಕರೆಯುತ್ತಿದೆ. ಇನ್ನು ಮಾರ್ಕಂಡೇಯ ನದಿ ಹಾಗೂ ಘಟಪ್ರಭಾ ನದಿಗೆ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಗೋಕಾಕ ನಗರ ಹಾಗೂ ಶಿಂಗಳಾಪುರ ಗ್ರಾಮದ ಮಧ್ಯೆ ಕಟ್ಟಲಾಗಿದ್ದ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಾಗಿದೆ. ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಿಂದ ಸಂಚಾರಕ್ಕೆ ಏನೂ ತೊದರೆ ಇಲ್ಲ. ಹೊಸದಾಗಿ ನಿರ್ಮಿಸಿರುವ ಸೇತುವೆ ಹಾಗೂ ಲೊಳಸೂರ ಸೇತುವೆಯ ಮೂಲಕ ವಾಹನ ಸಂಚಾರ ಎಂದಿನಂತೆ ಸಾಗಿದೆ. ಮಳೆಯ ಮುನಿಸಿನ ಕಾರಣ ಜಲಾಶಯಗಳಲ್ಲೂ ಸಹ ಕುಡಿಯುವುದರ ಸಲುವಾಗಿ ಮಾತ್ರ ನೀರು ಶೇಖರಣೆಯಾಗಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದರು. ಆದರೆ ಸದ್ಯ ಮಹಾರಾಷ್ಟ್ರದಲ್ಲಿ ಮಳೆ ಚುರುಕಾಗಿದ್ದು ರಾಜ್ಯದತ್ತ ನೀರು ಹರಿದು ಬರುತ್ತಿರುವುದರಿಂದ ರೈತಾಪಿ ವರ್ಗವೂ ನಿಟ್ಟುಸಿರು ಬಿಟ್ಟಿದೆ.













