


ಬೆಳಗಾವಿ:
ಮಗಳು ಮಾಡಿದ ಘನಕಾರ್ಯದಿಂದ ಮನನೊಂದು ತಾಯಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಕಟ್ಟಿಕೊಂಡ ಗಂಡನನ್ನೆ ಮಡದಿ ಕೊಂದು ಜೈಲುಪಾಲಾಗಿದ್ದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿತ್ತು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯೂ ಸಹ ಆಗಿತ್ತು. ಸಂದೀಪ್ ಮಂಜರಗಿ(ಆರೋಪಿಯ ಗಂಡ)ನ ಕೊಲೆ ಪ್ರಕರಣದಲ್ಲಿ ಆರೋಪಿ ಸುಮಾ ಮಂಜರಗಿ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ. ಆದರೆ ಮಗಳು ಮಾಡಿದ್ದ ಈ ಕೊಲೆಯಿಂದ ತಾಯಿ ಸಾಕಷ್ಟು ಮನನೊಂದಿದ್ದಳು ಎನ್ನಲಾಗಿದೆ. ಅಲ್ಲದೇ ಹೆತ್ತ ಮಗಳೇ ಗಂಡನ ಕೊಲೆ ಮಾಡಿ ಬೇರೊಬ್ಬನ ಜೊತೆಗೆ ಲವ್ವಿ ಡವ್ವಿ ನಡೆಸಿದ್ದು ಸಹ ಮಹಾದೇವಿಗೆ ಘಾಸಿಯುಂಟು ಮಾಡಿತ್ತು ಎನ್ನಾಲಾಗಿದೆ. ಇದೇ ಹಿನ್ನೆಲೆಯಲ್ಲಿ ಇಂದು ಮಹಾದೇವಿ ಘೋಡಗೇರಿಯ ತಮ್ಮ ನಿವಾಸದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








