ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ದುರ್ಮರಣ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಬೆಳಗಾವಿ ಐದು ಮಂದಿ ಭಕ್ತರು ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಇತರ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಹನುಮಂತು (38), ಹನುಮಂತು (ಚಾಲಕ, 42), ಅಂಬಿಕಾ (14), ಶೋಭಾ (36) ಮತ್ತು ಮನಂದ (32) ಎಂದು ಗುರುತಿಸಲಾಗಿದೆ. ಮೃತರಲ್ಲಿ ಶೋಭಾ ಮತ್ತು ಅಂಬಿಕಾ ತಾಯಿ-ಮಗಳಾಗಿದ್ದಾರೆ. ಕಸ್ತೂರಿ, ಮೇಘಾ, ಶಿವಾನಂದ್, ಬಸಪ್ಪ, ಮಲ್ಲಪ್ಪ, ಅಕ್ಷಿತ, ಉದಯ, ಸುನಂದಾ, ಮಹೇಶ್, ಸಾಕ್ಷಿ ಮತ್ತು ಬಸವರಾಜ ಸೇರಿದಂತೆ ಒಟ್ಟು 11 ಜನರು ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ನಿವಾಸಿಗಳು ಕ್ರೂಸರ್ ವಾಹನದ ಮೂಲಕ ತಿರುಪತಿ ಪ್ರವಾಸ ಕೈಗೊಂಡಿದ್ದರು. ತಿಮ್ಮಪ್ಪನ ದರ್ಶನ ಪಡೆದ ಭಕ್ತಾದಿಗಳು ಮತ್ತೆ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಜರುಗಿದೆ.
ಇಂದು ನಸುಕಿನ ಜಾವ ಸರಿ ಸುಮಾರು 3.30ಕ್ಕೆ ಮಠಂಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ 16 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.