ಬೆಳಗಾವಿ:
ರಾಜ್ಯ ರಾಜಕೀಯದ ಕುತೂಹಲದ ಕೇಂದ್ರಬಿಂದುವಾಗಿರುವ ಗೋಕಾಕನಲ್ಲಿ ಗ್ರಾಮದೇವಿಯ ಜಾತ್ರೆ ಕಳೆಗಟ್ಟಿದೆ.ಗೋಕಾಕ ಜನರು ತಮ್ಮನೆರೆ ಹೊರೆಯವರು ಹಾಗೂ ಬಂಧುಮಿತ್ರರನ್ನು ಮನೆಗೆ ಕರೆದು ಅವರಿಗೆ ಆದರಾತೀಥ್ಯ ನೀಡಿ ಕಳಿಸುತ್ತಿದ್ದಾರೆ. ಸಧ್ಯ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರೂ ಸಹ ತಮ್ಮ ಬಂಧು ಮಿತ್ರನ್ನು ಜಾತ್ರೆಗೆ ಆಹ್ವಾನಿಸಿದ್ದರು. ಅದರಂತೆ ಬಿಜೆಪಿ ಪಾಲಿನ ರೆಬಲ್ಸ್ ಎಂದೇ ಖ್ಯಾತನಾಮರಾಗಿರುವ ಶಾಸಕ ಬಿ ಪಿ ಹರೀಶ್,ಅರವಿಂದ ಲಿಂಬಾವಳಿ, ಹಾಗೂ ಕುಮಾರ್ ಬಂಗಾರಪ್ಪ ನಿನ್ನೆ ಸಂಜೆ ಬೆಳಗಾವಿಗೆ ಆಗಮಿಸಿದ್ದರು ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕುಮಾರ್ ಬಂಗಾರಪ್ಪ ನಾವು ರಮೇಶ ಜಾರಕಿಹೊಳಿಯವರ ಆಹ್ವಾನದ ಮೇರೆಗೆ ಗೋಕಾಕ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲು ಬಂದಿದ್ದೆವೆ ಎಂದಿದ್ದರು. ಇನ್ನು ಮಾಧ್ಯಮಗಳು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾವು ನೀವು ಕಾಲಕ್ಕಾಗಿ ಕಾಯೋಣ ಎಂದು ಹೇಳಿದ್ದರು.ರಾಜಕೀಯ ಎನಾದರೂ ಚರ್ಚೆ ಆಗುತ್ತಾ ಎಂದು ಕೇಳಿದ್ದಕ್ಕೆ ದೇವಿಯ ದರ್ಶನ ಮಾಡಿ ಹೊರಡುತ್ತೆವೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದರು. ಅದರಂತೆ ಇಂದು ಗೋಕಾಕ ನಗರದ ಶಾಸಕರ ಮನೆಗೆ ಆಗಮಿಸಿದ ನಾಯಕರನ್ನು ಶಾಸಕ ರಮೇಶ ಜಾರಕಿಹೊಳಿ ಸ್ವಾಗತಿಸಿಕೊಂಡರು. ನಂತರ ಲಕ್ಷ್ಮೀ ದೇವಿಯ ದರ್ಶನಕ್ಕೆ ಬಂದ ನಾಯಕರು ದೇವಿಯ ದರ್ಶನ ಪಡೆದುಕೊಂಡರು. ಶಾಸಕ ಬಿ ಪಿ ಹರೀಶ್ ಹಾಗೂ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿಗೆ ಶಾಸಕ ರಮೇಶ ಜಾರಕಿಹೊಳಿ, ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್, ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಸಾಥ್ ನೀಡಿದರು.











