ಬೆಳಗಾವಿ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ ಸರ್ಕಾರ ಕೊಟ್ಟ ಮಾತಿನಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗದ ಮಾದರಿಯಲ್ಲಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.ಹೌದು ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗದಂತೆ ಸಂಬಳ ಜಾರಿ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಸೈಕಲ್ ರ್ಯಾಲಿ ಮಾಡಿದರು. ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.ಸರ್ಕಾರ ತಮ್ಮ ಅಧೀನದಲ್ಲಿರುವ ಬೇರೆ ನಿಗಮ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಸರ್ಕಾರದ ಅಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ತಾರತಮ್ಯ ಧೋರಣೆ ಮಾಡುತ್ತಾ, ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿಸಿದ್ದಾರೆ.ಸರ್ಕಾರಿ ನೌಕರರ ವೇತನಕ್ಕೆ ನಮ್ಮ ವೇತನ ಹೋಲಿಸಿದ್ರೆ ನಮ್ಮ ವೇತನ ಅತ್ಯಲ್ಪವಾಗಿದೆ. ಊರೂರು ಸುತ್ತುವ ಹಾಗೂ ಅತೀ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಾವು ಅತೀ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಆರೋಗ್ಯ ಭಾಗ್ಯ ಸೌಲಭ್ಯ ಕೂಡ ಇಲ್ಲ. ನಮ್ಮ ಬೇಡಿಕೆ ಈಡೇರಿಸುವಂತೆ ಡಿಸೆಂಬರ್ 2020ರಲ್ಲಿ ಮುಷ್ಕರ ಮಾಡಿದ ಸಂದರ್ಭದಲ್ಲಿ ಸರ್ಕಾರ 3 ತಿಂಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಲಿಖಿತ ಭರವಸೆ ಕೊಟ್ಟಿದ್ದರು.ಆ ಸಂದರ್ಭದಲ್ಲಿ ನಾವು ಮುಷ್ಕರ ಕೈ ಬಿಟ್ಟಿದ್ದೇವು. ಈ ಗಡುವು ಮುಗಿದರೂ ಕೂಡ ನಮ್ಮ ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ಎಪ್ರೀಲ್ 2021ರಲ್ಲಿ ಸಾರಿಗೆ ಮುಷ್ಕರ ಮಾಡಿದ ಸಂದರ್ಭದಲ್ಲಿ ಬೇಡಿಕೆ ಈಡೇರಿಸು ಬದಲು ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತ್ತು ಮಾಡಲಾಗಿತ್ತು. ಸುಳ್ಳು ಪೊಲೀಸ್ ಕೇಸ್ಗಳನ್ನು ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ಹಾಕಲಾಗಿತ್ತು. ಇದೀಗ ಮತ್ತೆ ತಮ್ಮ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಸೈಕಲ್ ರ್ಯಾಲಿ ಆರಂಭಿಸಿದ್ದು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಇದೇ ವೇಳೆ ಮಾತನಾಡಿದ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರು ಮುಖಂಡರು ಕಳೆದ ತಿಂಗಳು ಅಕ್ಟೋಬರ್ 10ರಂದು ಬಳ್ಳಾರಿಯಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇವು. ಹೊಸಪೇಟೆ, ಕೊಪ್ಪಳ, ಯಾದಗಿರಿ, ರಾಯಚೂರ, ಬೀದರ್, ಕಲಬುರ್ಗಿ, ವಿಜಯಪುರ ಮಾರ್ಗವಾಗಿ ಇಂದು ಬೆಳಗಾವಿಗೆ ಆಗಮಿಸಿದ್ದೇವೆ. ನಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಸರ್ಕಾರ ಬಗೆಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಮಹೇಶ ಶೀಗಿಹಳ್ಳಿ ಸುಮಾರು 50ರಿಂದ 60 ದಿನಗಳವರೆಗೆ ರಾಜ್ಯಾಧ್ಯಂತ ಸಾರಿಗೆ ನೌಕರರು ಸೈಕಲ್ ಜಾಥಾ ಮೂಲಕ ಪ್ರಯಾಣ ಮಾಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು
tv24plus.in > Blog > ಜಿಲ್ಲೆ > ಬೆಳಗಾವಿ > ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸೈಕಲ್ ರ್ಯಾಲಿ