ಖಾನಾಪುರ: ಖಾನಾಪುರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ನಂಬಿಕೊಂಡು ತಾಲೂಕಿನ ರೈತರು ಕಾರ್ಖಾನೆಗೆ ಕಬ್ಬು ಕಳಿಸುತ್ತಾರೆ ಆದರೆ ಈ ಕಾರ್ಖಾನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಇದರಿಂದ ತಾಲೂಕಿನ ರೈತರ ಪರಿಸ್ಥಿತಿ ಅತಂತ್ರವಾಗಿದ್ದು ಅಲ್ಲದೇ ಈ ಆರೋಪಕ್ಕೂ ರಾಜಕೀಯ ಏನೂ ಸಂಬಂಧವಿಲ್ಲ ಇಲ್ಲ. ಈಗ ಚುನಾವಣೆ ಮುಗಿದಿದ್ದು, ನೀವು ದಾಖಲೆ ಸಮೇತ ಬಹಿರಂಗ ಚರ್ಚೆ ಬರುವಂತೆ ಶಾಸಕ ವಿಠಲ ಹಲಗೇಕರ್ ಅವರಿಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಳರ್ ಸವಾಲ್ ಹಾಕಿದ್ದಾರೆ.
ಖಾನಾಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಂಜಲಿ ನಿಂಬಾಳ್ಳರ್ ಮಾಹಿತಿ ಹಕ್ಕಿನಡಿ ಯಾವುದೇ ದಾಖಲೆ ಕೊಡುತ್ತಿಲ್ಲ. ಕಳೆದ 6 ವರ್ಷಗಳಿಂದ ಬೆನ್ನು ಬಿದ್ದ ಮೇಲೆ ನಿವೃತ್ತ ನ್ಯಾಯಾಧೀಶರಾದ ಎಸ್.ಪಿ.ವಸ್ತ್ರದ ಅವರ ನೇತೃತ್ವದಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದ ಅವರು, ಇದರಲ್ಲಿ ರಾಜಕೀಯ ಏನೂ ಇಲ್ಲ. ಚುನಾವಣೆ ಮುಗಿದಿದೆ. ರಾಜಕೀಯ ಮಾಡುವುದಾಗಿದ್ದರೆ ಚುನಾವಣೆ ವೇಳೆಯೇ ಹೇಳುತ್ತಿದ್ದೆ. ನಮ್ಮ ಕಾರ್ಯಕರ್ತರಿಗೂ ಈ ಬಗ್ಗೆ ನಾನು ತಿಳಿಸಿರಲಿಲ್ಲ. ಅವರ ಬಳಿ ದಾಖಲೆ ಇದ್ದರೆ ಖಾನಾಪುರ ಪಟ್ಟಣದ ಮಲಪ್ರಭಾ ಮೈದಾನಕ್ಕೆ ದಾಖಲೆ ಸಮೇತ ಬರಲಿ. ನಾನು ಕೂಡ ಬರುತ್ತೇನೆ ಎಂದು ಚಾಲೆಂಜ್ ಮಾಡಿದರು.
ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಅವ್ಯವಹಾರ ತನಿಖೆ ಹಿನ್ನೆಲೆ ನಾನು ದೂರುದಾರಳಾಗಿದ್ದು, ನನ್ನ ಉದ್ದೇಶ ಹೇಳಲು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಅವ್ಯವಹಾರ, ಹಣದ ದುರುಪಯೋಗದ ದೂರು ನೀಡಿದ್ದೇನೆ. ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ. 2009ರಲ್ಲಿ ಖಾಸಗಿ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಕೊಡ್ತಾರೆ. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಅನೇಕ ಷರತ್ತು ವಿಧಿಸಲಾಗಿತ್ತು. ಇಲ್ಲಿಯವರೆಗೆ ಲೈಲಾ ಸಕ್ಕರೆ ಕಾರ್ಖಾನೆಯವರು ಷರತ್ತು ಈಡೇರಿಸಿಲ್ಲ. ಲೈಲಾ ಸಕ್ಕರೆ ಕಾರ್ಖಾನೆಗೆ ಯಾರೊಬ್ಬರೂ ಪ್ರಶ್ನೆ ಕೇಳಿಲ್ಲ ಎಂದರು.